ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ ವಿವಿಧ ಬೆಳೆಗಳ 8157.04 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 74203.61 ಟನ್ ರಸಗೊಬ್ಬರನ್ನು ದಾಸ್ತಾನು ಮಾಡಲಾಗಿದ್ದು, ಜಿಲ್ಲೆಯಲ್ಲಿ ಬೀಜ ಹಾಗೂ ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 2023ರ ಜನವರಿ 1ರಿಂದ ಜುಲೈ6ರವರೆಗೆ ವಾಡಿಕೆ ಮಳೆ 161.70 ಮೀ.ಮೀ.ಇದ್ದು, 137.20 ಮೀ.ಮೀ. ಮಳೆಯಾಗಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್.01 ರಿಂದ ಜುಲೈ 6ರವರೆಗೆ ವಾಡಿಕೆಯಂತೆ 99 ಮೀ.ಮೀ. ಮಳೆಯಾಗಬೇಕಾಗಿದ್ದು, 48 ಮೀ.ಮೀ. ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ.52 ರಷ್ಟು ಕಡಿಮೆ ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ 7,36,794 ಹೆಕ್ಟೇರ್ ಬಿತ್ತನೆ ಗುರಿ ಎದುರು 1,01,023 ಹೆಕ್ಟೇರ್ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಗೋವಿನ ಜೋಳ 13040 ಹೇ., ಸಜ್ಜೆ 145, ತೊಗರಿ 48025, ಹೆಸರು 85, ಉದ್ದು 20, ಹತ್ತಿ 4925 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.