ವಿಜಯಪುರ: ಜಂತುಹುಳ ನಿವಾರಕ ಮಾತ್ರೆ ಸೇವಿಸಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬಿಸಿ ಊಟದ ನಂತರ 150 ವಿದ್ಯಾರ್ಥಿಗಳಿಗೆ ಡಿಇಸಿ ಮಾತ್ರೆಗಳನ್ನು ನೀಡಲಾಗಿದೆ. ಆದರೆ, ಇದರಲ್ಲಿ 8 ಹಾಗೂ ಪಟ್ಟಣದ ಆದರ್ಶ ಮಹಾವಿದ್ಯಾಲಯದ ಓರ್ವ ವಿದ್ಯಾರ್ಥಿಯಲ್ಲಿ ಹೊಟ್ಟೆ ನೋವು, ವಾಂತಿ, ತಲೆಸುತ್ತು ಕಾಣಿಸಿಕೊಂಡಿದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಓಆರ್ ಎಸ್ ನೀಡಲಾಗಿದೆ. ಆದರೆ, ಹೊಟ್ಟೆನೋವು, ತಲೆಸುತ್ತು ಹೆಚ್ಚಾದ ಪರಿಣಾಮ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.