ವಿಜಯಪುರ: ಕಾಂಗ್ರೆಸ್ನವರು ಯಾಕೆ ದಲಿತ ಸಿಎಂ ಮಾಡಲಿಲ್ಲ. ಯಾರಾದರೂ ಆಣೆ ಹಾಕಿದ್ರಾ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದರು.
ವಿಜಯಪುರದ ಬುರಣಾಪುರ ಮದಬಾವಿ ಹತ್ತಿರವಿರುವ ವಿಮಾನ ನಿಲ್ದಾಣ ಸ್ಥಳವನ್ನು ಶನಿವಾರ ವೀಕ್ಷಣೆ ಮಾಡಿದರು.
ಈ ವೇಳೆಯಲ್ಲಿ ಲೋಹದ ಹಕ್ಕಿ ಹಾರಾಟಕ್ಕೆ ಬೇಕಿರುವ ಮೂಲಸೌಕರ್ಯ ಸೇರಿದಂತೆ ಕಾಮಗಾರಿಗೆ ಬೇಕಿರುವ ಸೌಕರ್ಯಗಳನ್ನು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.
ತದನಂತರ ಮಾತನಾಡಿದ ಅವರು, ದೇಶದಲ್ಲಿ ಹಲವು ವರ್ಷ ಕಾಂಗ್ರೆಸ್ ನವರೇ ಆಡಳಿತ ಮಾಡಿದ್ದಾರೆ. ದಲಿತರನ್ನು ಪ್ರಧಾನಮಂತ್ರಿ ಮಾಡಬಹುದಿತ್ತು. ಆದ್ರೂ, ಮಾಡಲಿಲ್ಲ. ದಲಿತರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಇಂಗಿತ ವ್ಯಕ್ತಮಾಡಿದ್ರು. ಅಲ್ಲದೇ, ಭಾಬು ಜಗಜೀವನರಾಮ್ ಪ್ರಧಾನಿ ಆಗಬಹುದಿತ್ತು.
ಆಗ ಕಾಂಗ್ರೆಸ್ ನವರು ವಿರೋಧ ಮಾಡಿ ಹೀನಾಯವಾಗಿ ಸೋಲಿಸಿದ್ರು ಎಂದು ವಾಗ್ದಾಳಿ ಮಾಡಿದರು.
ಅಲ್ಲದೇ, ಕಾಂಗ್ರೆಸ್ನಿಂದ ದಲಿತರ ಉದ್ಧಾರ ಆಗಲಿಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ನದು ಹೀನ ಮನಸ್ಥಿತಿ ಇದೆ. ದಲಿತರು ವಿದ್ಯಾವಂತರಾಗಬಾರದು. ಅವರ ಕಾಲ ಮೇಲೆ ದಲಿತರು ನಿಲ್ಲಬಾರದು ಎಂದರು.