ವಿಜಯಪುರ: ಕೇಂದ್ರ, ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನತೆ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ವಿಜಯಪುರ ನಗರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕಾಂಗ್ರೆಸ್ ಮಹಿಳಾ ಘಟಕದ ಕೆಲಸ ಮಾಡುತ್ತದೆ. ಅದಕ್ಕಾಗಿ ಕಾಂಗ್ರೆಸ್ ಮಹಿಳಾ ಘಟಕ ಹಗಲಿರುಳು ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸುತ್ತದೆ ಎಂದರು.
ಮಹಿಳಾ ಮೀಸಲಾತಿ ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರು, ಪುರುಷರು ಸಮಾನರು ಎಂದು ಸರ್ಕಾರಗಳು ಒತ್ತು ನೀಡಬೇಕು. ಮಹಿಳೆಯರ ಪರವಾಗಿ ಪ್ರಧಾನಿ ಮೋದಿ ಯಾವ ಕೆಲಸಗಳನ್ನು ಮಾಡಿಲ್ಲ. ಮಹಿಳಾ ಮೀಸಲಾತಿ ಜಾರಿಗೆ ಮಾಡಿಲ್ಲ ಎಂದು ಕಿಡಿಕಾರಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ 88 ಮಹಿಳೆಯರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದದ್ದಾರೆ. ಇದು ಸಂತಸದ ಸಂಗತಿ ಆಗಿದೆ. ಅದೇ ತರಹ ಎಲ್ಲಾ ಪಕ್ಷದಲ್ಲೂ ಮಹಿಳೆಯರಿಗೆ ಸ್ಥಾನಮಾನಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಮಹಿಳಾ ಮೀಸಲಾತಿ ಜಾರಿಗೆ ಆಗಿಲ್ಲ. ಆದ್ರೂ, ಮಹಿಳೆಯರು ಪುರುಷರು ಸಮಾನವಾದ ಸ್ಥಾನ ನೀಡಬೇಕು. ಮೂರು ತಿಂಗಳಲ್ಲಿ ಚುನಾವಣೆ ಘೋಷಣೆ ಆಗುತ್ತದೆ. ಅದಕ್ಕಾಗಿ ಮಹಿಳೆಯರಿಗೂ ಟಿಕೆಟ್ ನೀಡಬೇಕು ಎಂದರು.
ಮತದಾರರ ಹೆಸರು ಡಿಲಿಟ್ ವಿಚಾರ
ಮತದಾರರ ಹೆಸರು ಡಿಲಿಟ್ ಆಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಅದಕ್ಕಾಗಿ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ. ಇದು ತನಿಖೆ ನಡೆಯುತ್ತಿದೆ. ಅದೇ ತರಹ ವಿಜಯಪುರದಲ್ಲೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರ ಹೆಸರು ಡಿಲಿಟ್ ಆಗಿದೆ. ಇದನ್ನು ಸೂಕ್ತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.