ವಿಜಯಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ತೆರಳಿದ್ದ ಶಾಸಕ ಚವ್ಹಾಣ ಮರಳಿ ಬರುವಾಗ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ- ಸಿಂದಗಿ ರಸ್ತೆಯಲ್ಲಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ನಾಲ್ಕೈದು ಜನರಿಗೆ ತೀವ್ರ ಗಾಯಗಳಾಗಿ ನರಳಾಡುತ್ತಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ಶಾಸಕರು ಕೂಡಲೇ ಆ್ಯಂಬುಲನ್ಸ್ ಗೆ ಕರೆ ಮಾಡಿ ಎಲ್ಲರನ್ನು ಅದರಲ್ಲಿ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟರು. ರಸ್ತೆ ಅಪಘಾತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದ ಶಾಸಕ ಚವ್ಹಾಣ ಅಷ್ಟೇ ಅಲ್ಲ. ತಾವೇ ಖುದ್ದಾಗಿ ಆ್ಯಂಬುಲನ್ಸ್ ಹಿಂದೆ ಜಿಲ್ಲಾಸ್ಪತ್ರೆಗೆ ತೆರಳಿ ಮಾನವೀಯತೆ ಮೆರೆದಿದರು. ದೇವರ ಹಿಪ್ಪರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.