ವಿಜಯಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 24ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ 1,17,92,651 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ತಿಳಿಸಿದ್ದಾರೆ. ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 818 ಅಬಕಾರಿ ದಾಳಿ ನಡೆಸಿ, 76 ಘೋರ, 13 ಬಿಎಲ್ಸಿ ಹಾಗೂ 15(ಎ) 632 ಪ್ರಕರಣಗಳು ಸೇರಿದಂತೆ 721 ಪ್ರಕರಣಗಳನ್ನು ದಾಖಲಿಸಿ, 839 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 4,15,436ರೂ. ಮೌಲ್ಯದ 999.09 ಲೀ. ಮದ್ಯ, 6,400 ರೂ. ಮೌಲ್ಯದ 7.4 ಲೀ. ಹೊರ ರಾಜ್ಯದ ಮದ್ಯ, 52,34,565 ರೂ. ಮೌಲ್ಯದ 22,271 ಲೀ. ಬೀಯರ್, 12,850 ರೂ. ಮೌಲ್ಯದ 128.50 ಲೀ. ಕಳ್ಳಭಟ್ಟಿ ಸರಾಯಿ ಹಾಗೂ 400 ರೂ.ಮೌಲ್ಯದ 04 ಲೀ.ಸೇಂಧಿ ಸೇರಿದಂತೆ, 56,69,651ರೂ. ಮೌಲ್ಯದ 23,410.23ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ, ಅಬಕಾರಿ ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವ 35,23,000ರೂ. ಮೌಲ್ಯದ 58 ದ್ವಿಚಕ್ರ ವಾಹನ,11 ಲಕ್ಷ ರೂ. ಮೌಲ್ಯದ 02 ಲಘು ವಾಹನ ಹಾಗೂ 15 ಲಕ್ಷ ರೂ. ಮೌಲ್ಯದ 01 ಬೃಹತ್ ವಾಹನ ಸೇರಿದಂತೆ ಒಟ್ಟು 61,23,000ರೂ. ಮೌಲ್ಯದ 60 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.