ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮತ್ತೆ ಗೂಂಡಾಗಿರಿ ಆರಂಭ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಆರೋಪಿಸಿದರು. ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಅಲ್ಲದೇ, ಬಬಲೇಶ್ವರದಲ್ಲಿ ಕಾಂಗ್ರೆಸ್ ಮಹಿಳಾ ನಾಯಕರಿಗೆ, ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಎಂಬಿ ಪಾಟೀಲ ಪರ ಮತಯಾಚನೆ ಮಾಡಲು ಅಡ್ಡ ಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಮೊದಲು ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕು. ತದನಂತರ ಪ್ರಚಾರಕ್ಕೆ ಬರಬೇಕು ಎಂದು ಸವಾಲ್ ಹಾಕಿದರು. ಅಲ್ಲದೇ, ನಿನ್ನೆ ಮಾಜಿ ಗೃಹ ಸಚಿವ ಎಂಬಿಪಿ ಧರ್ಮಪತ್ನಿ ಆಶಾ ಪಾಟೀಲ್ ಮತಯಾಚನೆ ವೇಳೆ ಕಿಡಿಗೇಡಿಗಳು ಗದ್ದಲ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿಯ ಕೈವಾಡ ಇದೆ. ಈಗಾಗಲೇ ಪೊಲೀಸ ಠಾಣೆಗೆ ಕೇಸ್ ನೀಡಲಾಗಿದೆ. ಆದ್ರೇ, ಹೊರ ರಾಜ್ಯದಿಂದ ಆಗಮಿಸಿ ಗಲಾಟೆ ಮಾಡಿದ್ದಾರೆ. ಇದು ಹುಟ್ಟು ಗುಣ ಸುಟ್ಟರು ಹೋಗಲ್ಲ. ಅದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೈ ಅಭ್ಯರ್ಥಿ ಕಪಾಳಮೋಕ್ಷ: ಶಾಸಕ ಎಂಬಿ ಪಾಟೀಲ ಕಾರ್ಯಕರ್ತನಿಗೆ ಬುದ್ಧಿವಾದ ಹೇಳಿದ್ದಾರೆ. ಆದ್ರೂ, ಬುದ್ಧಿಮಾತು ಕೇಳದೇ ಇದ್ದಾಗ ಎರಡು ಏಟು ಬಾರಿಸಿದ್ದಾರೆ. ಇದು ಹಲ್ಲೆ ಅಲ್ಲ. ಇದು ವಿರೋಧ ಪಕ್ಷದವರು ತಿರುಚಿ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ದೀಪಾ ಕುಂಬಾರ ಸೇರಿದಂತೆ ಕಾರ್ಯಕರ್ತೆಯರು ಇದ್ದರು.