ಧಾರವಾಡ: ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿ ಶೀಟರ್ ಆಗಿದ್ದ ಫೂಟ್ ಇರ್ಫಾನ್ ಮಗ ಅರಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿದಂತೆ ನಾಲ್ವರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿಯನ್ನು ಹತ್ಯೆ ಮಾಡಲು ಐದು ಜನರ ತಂಡ ಅವರ ಮನೆಗೆ ನುಗ್ಗಿತ್ತು. ತಾವು ಅಂದುಕೊಂಡಂತೆ ಮಹ್ಮದ್ನನ್ನು ಹತ್ಯೆ ಮಾಡಿದ ಆರೋಪಿಗಳು, ಹತ್ಯೆ ಮಾಡುವ ಅವಸರದಲ್ಲಿ ತಮ್ಮ ಸಹಚರ ಗಣೇಶ ಕಮ್ಮಾರನ ಕಾಲಿಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದರು. ಇದರಿಂದ ಗಣೇಶ, ಮಹ್ಮದನ ಮನೆಯಿಂದ ಅನತಿ ದೂರ ಓಡಿ ಹೋಗಿ ಮೃತಪಟ್ಟಿದ್ದ. ಉಳಿದ ನಾಲ್ಕು ಜನ ಆರೋಪಿಗಳು ಗಣೇಶನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ರೌಡಿ ಶೀಟರ್ ಆಗಿದ್ದ ಫೂಟ್ ಇರ್ಫಾನ್ ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿ ಜೊತೆ ವ್ಯವಹಾರ ಮಾಡುತ್ತಿದ್ದ. ತನ್ನ ತಂದೆ ಫ್ರೂಟ ಇರ್ಫಾನ್ ಹತ್ಯೆ ನಂತರ ಮಗ ಅರಬಾಜ್, ಮಹ್ಮದ್ ಕುಡಚಿ ಜೊತೆ ವ್ಯವಹಾರ ಮಾಡಿಕೊಂಡಿದ್ದ. ವ್ಯವಹಾರದಲ್ಲಿ ಕಿರಿಕ್ ಆಗಿದ್ದೇ ಈ ಕೊಲೆಗೆ ಕಾರಣ ಎಂದು ಮಾಹಿತಿ ಗೊತ್ತಾಗಿದೆ. ಹತ್ಯೆ ಮಾಡಿದ ನಂತರ ಆರೋಪಿಗಳು ದಾಂಡೇಲಿಗೆ ತೆರಳಿದ್ದರು. ಧಾರವಾಡದ ಪೊಲೀಸರ ತಂಡ ಅಲ್ಲಿಗೆ ಹೋಗಿ ಹುಡುಕಾಟ ನಡೆಸಿದ ನಂತರ ಆರೋಪಿಗಳು ಅಲ್ಲಿಂದ ಮುಂಡಗೋಡಕ್ಕೆ ಬಂದಿದ್ದರು. ಕೊನೆಗೆ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಮುಂಡಗೋಡದಲ್ಲಿ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹತ್ಯೆ ಆರೋಪಿಗಳ ಬಂಧನಕ್ಕೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು. ಧಾರವಾಡ ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.