ವಿಜಯಪುರ: ಕನ್ಯಾ ನೀಡಲು ನಿರಾಕರಿಸಿದ್ದರಿಂದ ಕುಪಿತಗೊಂಡ ಕನ್ಯೆಯನ್ನೇ ಕೊಲೆ ಮಾಡಿದ್ದ ಆರೋಪಿಗೆ ವಿಜಯಪುರ ಜಿಲ್ಲೆಯ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇಂಡಿ ತಾಲೂಕಿನ ಭೂಯ್ಯಾರ ನಿವಾಸಿ ವಿಶ್ವೇಶ್ವರಯ್ಯ ಲೋಟಯ್ಯ ಹಿರೇಮಠ ಶಿಕ್ಷೆಗೊಳಗಾದ ಆರೋಪಿ. ಭೂಯ್ಯಾರ ಗ್ರಾಮದ ಶಿವರುದ್ರಯ್ಯ ಹಿರೇಮಠ ಎಂಬುವರು ಆರೋಪಿಗೆ ಮಗಳು ದಾನಮ್ಮಳನ್ನು ಮದುವೆ ಮಾಡಿಕೊಡಲು ಮುಂದಾಗಿದ್ದರು. ಆದರೆ ಶಿವರುದ್ರಯ್ಯ ಪತ್ನಿ ಅನ್ನಪೂರ್ಣ ಅವರು, ವಿಶ್ವೇಶ್ವರಯ್ಯನೊಟ್ಟಿಗೆ ಮದುವೆಗೆ ನಿರಾಕರಿಸಿದ್ದರು. ಅದಕ್ಕಾಗಿ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಇಂಡಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಭಾಸ ಸಂಕದ ಅವರು, ಸಾಕ್ಷಿ ಪರಿಶೀಲಿಸಿ, ಆರೋಪಿ ಮೇಲಿನ ಆಪಾದನೆ ರುಜುವಾತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಗದ ಪರವಾಗಿ 1ನೇ ಅಧಿಕ ಸರಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು.