ಧಾರವಾಡ: ಸೊಂಟದಲ್ಲಿ ಚಾಕು(Knife) ಇಟ್ಟುಕೊಂಡು ಕುಡುಕನೊಬ್ಬ ಪುಂಡಾಟ ನಡೆಸಿ, ಬಾಳೆಹಣ್ಣು ವ್ಯಾಪಾರಸ್ಥರಿಂದ ಸಾರ್ವಜನಿಕವಾಗಿಯೇ ಗೂಸಾ ತಿಂದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ(Dharwad) ಹಣ್ಣಿನ ಮಾರುಕಟ್ಟೆಯಲ್ಲಿ ಕುಡುಕನೊಬ್ಬ ವಿಪರೀತ ಮದ್ಯ ಕುಡಿದು ಬಾಳೆಹಣ್ಣಿನ(Banana) ವ್ಯಾಪಾರಿಯೊಂದಿಗೆ ಜಗಳ ತೆಗೆದಿದ್ದ. ಬಾಳೆಹಣ್ಣು ವ್ಯಾಪಾರಿಗಳು ಆತನಿಗೆ ಸಾರ್ವಜನಿಕವಾಗಿಯೇ ಗೂಸಾ ಸಹ ಕೊಟ್ಟಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಕುಡುಕ ಅಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ಬಾಳೆಹಣ್ಣು ವ್ಯಾಪಾರಿಯೊಬ್ಬನನ್ನು ಬೈಯುತ್ತಿದ್ದ. ಅಲ್ಲದೇ ಸೊಂಟದಲ್ಲಿ ಚಾಕು ಸಹ ಇಟ್ಟುಕೊಂಡಿದ್ದ. ಆತ ಆ ರೀತಿ ರಂಪಾಟ ನಡೆಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಚಾಕು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸಹ ಆ ಕುಡುಕನ ಚಳಿ ಬಿಡಿಸಿಯೇ ಠಾಣೆಗೆ ಕರೆದುಕೊಂಡು ಹೋದ ಪ್ರಸಂಗ ನಡೆಯಿತು.