ಹುಬ್ಬಳ್ಳಿ : ಕಲಘಟಗಿ ಬಣ್ಣದ ತೊಟ್ಟಿಲು ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು.ರಾಜಕಾರಣಿ, ಜನಪ್ರತಿನಿಧಿಗಳ ಮಕ್ಕಳು ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲು ಉಡುಗೊರೆಯಾಗಿ ನೀಡುವುದು ಹೊಸ ಟ್ರೆಂಡ್ ಆಗಿದೆ. ಈ ನಿಟ್ಟಿನಲ್ಲಿ ಈಗ ಕಲಘಟಗಿ ತೊಟ್ಟಿಲು ಮತ್ತೊಬ್ಬ ಮಹಾನ ವ್ಯಕ್ತಿಯ ಕೈಸೇರಲಿದೆ. ಸ್ಯಾಂಡಲ್ ವುಡ್ ಕಲಾವಿದರು, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಆಕರ್ಷಕ ಕಟ್ಟಿಗೆಯ ತೊಟ್ಟಿಲುಗಳನ್ನು ಮಾಡಿಕೊಟ್ಟು ಸುದ್ದಿ ಮಾಡಿದ್ದ ಧಾರವಾಡ ಜಿಲ್ಲೆಯ ಕಲಘಟಗಿಯ ತೊಟ್ಟಿಲು ಈಗ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಕೈ ಸೇರಲಿದೆ. ಹೌದು. ಇದೇ 12ರಂದು ಧಾರವಾಡ ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರು, ಐಐಟಿ ಉದ್ಘಾಟನೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಲೋಕಾರ್ಪಣೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗ ಕಲಘಟಗಿಯ ತೊಟ್ಟಿಲು ಉಡುಗೊರೆಯಾಗಿ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಹಾವೇರಿಯ ಯಾಲಕ್ಕಿ ಮಾಲೆ, ಸಿದ್ಧಾರೂಢರ ಮೂರ್ತಿ, ಕಸೂತಿಯ ಶಾಲ್ ಸೇರಿದಂತೆ ಹಲವಾರು ಉಡುಗೊರೆ ನೀಡಲು ನಿರ್ಧಾರ ಮಾಡಲಾಗಿದೆ. ಎರಡು- ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡಿಕೊಂಡು ಬಂದಿರುವ ಕುಟುಂಬದ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ ಬಡಿಗೇರ ಅವರು ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ತೊಟ್ಟಿಲು ತಯಾರಿಸಿದ್ದಾರೆ. ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆಗಳು, ತುಂಟಾಟಗಳು, ಬೆಣ್ಣೆಯೊಂದಿಗೆ ಕೃಷ್ಣ ಹೀಗೆ ಅನೇಕ ಕಥೆಗಳನ್ನು ಹೇಳಲು ಪ್ರೇರೇಪಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ. ತೊಟ್ಟಿಲಿನ ಸ್ಟಾಂಡ್ ಗೆ ಚಿಕ್ಕ ಗಂಟೆಗಳನ್ನು ಕಟ್ಟಿದ್ದು, ಕಣ್ಮನ ಸೆಳೆಯುವ ಬಣ್ಣಗಳಿಂದ ಅಲಂಕರಿಸಲಾಗಿದೆ. ತೇಗಿನ ಮರದಿಂದ ಮಾಡಿರುವ ತೊಟ್ಟಿಲಿಗೆ ಜೇಡಿಮಣ್ಣು, ಅಂಟು, ಅರಗು ಬಳಸಲಾಗಿದೆ. ಸಾಂಪ್ರದಾಯಿಕತೆಗೆ ಒತ್ತು ಕೊಡಲಾಗಿದೆ. ಅತ್ಯುತ್ತಮ ಗುಣಮಟ್ಟದ ಕಟ್ಟಿಗೆಗಳನ್ನು ಬಳಸಲಾಗಿದ್ದು, ಕನಿಷ್ಠ 100 ವರ್ಷ ಬಾಳಿಕೆ ಬರುತ್ತದೆ. ಶ್ರೇಷ್ಠ ಗುಣಮಟ್ಟ ಮತ್ತು ಕಡಿಮೆ ತೂಕದ ತೊಟ್ಟಿಲು ನಿರ್ಮಿಸಿದ್ದೇವೆ ಎಂದು ಮಾರುತಿ ಬಡಿಗೇರ ಹೇಳುತ್ತಾರೆ.