ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಕಂಡಂತ ಸ್ವಾಭಿಮಾನ, ಸಮಾನತೆ ಜೀವನ ಕನಸು ನನಸಾಗಿಸುವ ಕೆಲಸ ವಿಜಯಪುರದಲ್ಲಿ ಆಗಿದೆ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು. ನಗರದ ಅಥಣಿ ರಸ್ತೆಯ ಅಲ್ ಅಮೀನ್ ಹಿಂದುಗಡೆ ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾದ ಆಶ್ರಯ ಮನೆಗಳ ಹಂಚಿಕೆ ಪತ್ರ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿ ನಿರ್ಮಾಣಗೊಂಡಿರುವ ಗುಣಮಟ್ಟದ ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಸಮುದಾಯದ ಜನರು ಇಲ್ಲಿ ಒಟ್ಟಾಗಿ ಜೀವನ ನಡೆಸುವಂತೆ ಮಾಡಲಾಗಿದೆ. ಈ ಮೂಲಕ ಅಂಬೇಡ್ಕರ್ ಅವರ ಕನಸು ನನಸಾಗುತ್ತಿದೆ ಎಂದರು. ನಾನು ಬಡವರ ಸಲುವಾಗಿ ಕೆಲಸ ಮಾಡುತ್ತಿರುವೆ. ಒಂದು ನಯಾ ಪೈಸೆ ಹಣ ಪಡೆಯದೆ, ಸರ್ಕಾರಿ ವಂತಿಗೆ ಪಾಲಿಕೆಗೆ ತುಂಬಿಸಿ ಅರ್ಹ ಫಲಾನುಭವಿಗಳಿಗೆ ಮನೆ ನೀಡುತ್ತಿದ್ದೇವೆ. ಈ ಹಿಂದಿನವರು ಮನೆ ಕಟ್ಟಿಸದೆ ಅರ್ಜಿ ಪಡೆಯಲೇ ಐದು ಹತ್ತು ಸಾವಿರ ಪಡೆದುಕೊಳ್ಳುತ್ತಿದ್ದರು. ವಂತಿಗೆ ಹಣ ತುಂಬಲಾಗದ ಜನರಿಗೆ ಸಿದ್ದಸಿರಿಯಿಂದ ಸಾಲ ಸಹ ನೀಡಲಾಗುತ್ತದೆ. ಅಲ್ಲದೇ ತೀರಾ ಬಡವರಿಗಾಗಿರುವ 100 ಜನರಿಗೆ ವೈಯಕ್ತಿಕವಾಗಿ ತಲಾ 50 ಸಾವಿರ ನೀಡಿರುವೆ ಎಂದು ಹೇಳಿದರು.
ವಿಶ್ವದಲ್ಲೇ ಭಾರತ ಯಶಸ್ಸಿನತ್ತ ಕೊಂಡ್ಯೊಯ್ಯುತ್ತಿರುವ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ಇಟ್ಟಿರುವುದು ವಿಜಯಪುರದಲ್ಲಿ ನಮೋ ನಗರ. ಇಲ್ಲಿಗೆ ಬಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಇಲ್ಲಿ ನಿರ್ಮಾಣಗೊಂಡಿರುವ ಆಶ್ರಯ ಮನೆಗಳ ಎಲ್ಲ ಫಲಾನುಭವಿಗಳು ತಮ್ಮ ವಂತಿಗೆ ಹಣ ಪಾವತಿಸಿದರೆ, ಹಕ್ಕುಪತ್ರ ವಿತರಣೆ ಹಾಗೂ ಮತ್ತೆ 2000 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ಒಮ್ಮೆಯೇ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯ ಸ್ವಂತ ಮನೆ ಹೊಂದಬೇಕು ಎಂಬ ಕನಸು ಕಾಣುತ್ತಿದ್ದಾರೆ. ಅಂತವ ಕನಸು ನನಸಾಗಿಸಲು ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ಗುಣಮಟ್ಟದ ಆಶ್ರಯ ಮನೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಮೊದಲ ಹಂತದಲ್ಲಿ 300 ಮನೆಗಳ ಹಂಚಿಕೆ ಮಾಡಲಾಗಿದೆ. ಉಳಿದವರು ತಮ್ಮ ಪಾಲಿನ ವಂತಿಕೆ ತುಂಬಿದ ಬಳಿಕ ಅವರಿಗೂ ನೀಡಲಾಗುತ್ತದೆ. ಹೀಗಾಗಿ ಎಲ್ಲರೂ ಬೇಗ ತುಂಬಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಕಷ್ಟದಲ್ಲಿರುವ ಜನರಿಗೆ ಅವರ ಜೀವನದ ಕನಸಾದ ಸೂರು ಕಲ್ಪಿಸುವ ಮಹತ್ತರ ಕಾರ್ಯ ನಗರ ಶಾಸಕರು ಹಾಗೂ ಅಧಿಕಾರಿ ವರ್ಗಗಳಿಂದ ಆಗಿದೆ. ನಾನು ಮೂಲಕ ಸಿವಿಲ್ ಎಂಜಿನಿಯರ್ ಆಗಿದ್ದು, ಇಲ್ಲಿನ ಮನೆಗಳನ್ನು ವೀಕ್ಷಿಸಿದಾಗ ಉತ್ತಮ ಗುಣಮಟ್ಟದ ಮನೆಗಳು ನಿರ್ಮಾಣವಾಗಿರುವುದು ತಿಳಿತು. ಇಂತಹ ಗುಣಮಟ್ಟದ ಕಾಮಗಾರಿ ಬೇರೆ ಎಲ್ಲೂ ನೋಡಿಲ್ಲ. ನಮ್ಮೆಲ್ಲೆ ನೆಚ್ಚಿನ ನಾಯಕರಾದ ನಗರ ಶಾಸಕರು ಬಡವರ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು. ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಇದೇ ವೇಳೆ ಬಡ ಆಶ್ರಯ ಮನೆ ಬಡ ಫಲಾನುಭವಿಗಳಿಗೆ ವೈಯಕ್ತಿಕ 50 ಸಾವಿರ ರೂ ಚೆಕ್ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಪ್ರಾಸ್ತಾವಿಕ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಇದ್ದರು.
ಕೋರ್ಟ್
ಕಾರ್ಯಾಂಗ, ಶಾಸಕಾಂಗ ಒಳ್ಳೆಯ ಕೆಲಸ ಮಾಡಿದರೆ ದೇಶದಲ್ಲಿ ಮಾದರಿ ಕಾರ್ಯಗಳು ಆಗುತ್ತದೆ. ಅದಕ್ಕೆ ಸಾಕ್ಷಿ ನಮ್ಮ ಅಧಿಕಾರಿಗಳ ಸಹಕಾರದಿಂದ ನಗರದ ಅಭಿವೃದ್ಧಿ ಹಾಗೂ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ದಾಖಲೆ ರೀತಿಯಲ್ಲಿ ಯಶಸ್ವಿಯಾಗಿರುವುದು
ಬಸನಗೌಡ ಪಾಟೀಲ ಯತ್ನಾಳ, ಶಾಸಕ