ವಿಜಯಪುರ: ಜೆಡಿಎಸ್ ಭದ್ರಕೊಟೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದೆ. ಆದ್ರೇ, ಸಿಂದಗಿ ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಅಸಹಕಾರ, ಕಾರ್ಯಕರ್ತರ ವಿರುದ್ಧ ಧೋರಣೆ ಖಂಡಿಸಿ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರು ರಾಜೀನಾಮೆ ನೀಡಿದ್ದಾರೆ. 13 ಜೆ.ಡಿ.ಎಸ್ ಪದಾಧಿಕಾರಿಗಳು ಸಾಮೂಹಿಕ ರಾಜಿನಾಮೆ ನೀಡಿದ್ದೇವೆ ಎಂದು ಜೆಡಿಎಸ್ ಸಿಂದಗಿ ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ ಗುರುವಾರ ವಿಜಯಪುರ ನಗರದಲ್ಲಿ ಮಾಹಿತಿ ನೀಡಿದರು. ಪಕ್ಷದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಅದಕ್ಕಾಗಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಮಾಹಿತಿ ನೀಡಿ, ರಾಜೀನಾಮೆ ನೀಡಿದ್ದೇವೆ ಎಂದರು.