ವಿಜಯಪುರ: ಶತಮಾನ ಕಂಡ ಶ್ರೀ ಸಿದ್ದೇಶ್ವರ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ತರ ಕಾರ್ಯ ಮಾಡಲಾಗುತ್ತಿದೆ ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಹೇಳಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಡಾ.ಫ.ಗು.ಹಳಕಟ್ಟಿ ಸಭಾಭವನದಲ್ಲಿ ಈಚೆಗೆ ನಡೆದ ೨೦೨೨-೨೩ನೇ ಸಾಲಿನ ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕೌಲಗಿ ಹಾಗೂ ವಿಜಯಪುರ ನಗರದಲ್ಲಿ ಶಾಲಾ-ಕಾಲೇಜುಗಳ ಮೂಲಕ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನುಕೂಲ ಆಗಲೆಂದು ಬರುವ ಶೈಕ್ಷಣಿಕ ವರ್ಷದಿಂದಲೇ, ಪ್ರತಿ ವರ್ಷ ಒಂದೊಂದು ತಾಲ್ಲೂಕಿನಲ್ಲಿ ಪಬ್ಲಿಕ್ ಶಾಲೆ ಆರಂಭಿಸಿ, ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ತಾಳಿಕೋಟಿ ಪಟ್ಟಣದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಗೆ ದೇಣಿಗೆ ನೀಡಲಾದ ೩ ಎಕರೆ ೧೭ ಗುಂಟಾ ಜಮೀನಿನ ಪೈಕಿ, ೨ ಎಕರೆ ಜಾಗೆಯಲ್ಲಿ ದಿ. ಶ್ರೀ ಬಿ.ಓ.ತಂಬಾಕೆ ಅವರ ಹೆಸರಿನಲ್ಲಿ ಪಬ್ಲಿಕ್ ಶಾಲೆ ಬರುವ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಲಾಗುವುದು. ಅಲ್ಲದೇ, ಅತ್ಯುತ್ತಮವಾದ ಕಲ್ಯಾಣ ಮಂಟಪದ ಸೇವೆ ಕೂಡ ಸಾರ್ವಜನಿಕರಿಗೆ ಸಿಗಲಿದೆ ಎಂದರು. ಅದೇ ರೀತಿ ಬರುವ ಶೈಕ್ಷಣಿಕ ವರ್ಷ ಜೂನ್ ದಿಂದ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಿಂದ ಪಬ್ಲಿಕ್ ಶಾಲೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಸಿದ್ದೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಬಾ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ ವಿಭೂತಿ, ಬಿಳಿ ದಂತಮಂಜನ, ಕೆಂಪು ದಂತಮಂಜನ, ಕಪ್ಪು ದಂತ ಮಂಜನ, ಚರ್ಮ ರೋಗ ನಿವಾರಣ ಮಲಾಮ, ಪಂಚಗವ್ಯ ಸಾಬೂನು, ಪಾತ್ರೆ ತೊಳೆಯುವ ಸಾಬೂನು, ಪಂಚಗವ್ಯ ಗೃತ್, ಕುಂಕುಮ, ಮಜ್ಜಿಗೆ, ತುಪ್ಪ, ಎರೆಹುಳು ಗೊಬ್ಬರ, ಕುಳ್ಳ ತಯಾರಿಸಲಾಗುತ್ತಿದೆ ಇದರಿಂದ ಉತ್ತಮ ಆದಾಯ ಬರುತ್ತಿದೆ. ಅದೇ ರೀತಿ ವಿಜಯಪುರ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ೫ ಮಹಡಿಯ ಶಿವಾನುಭವ ಮಂಟಪ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದ್ದು, ಅದರ ಮಳಿಗೆಯಿಂದಲೂ ಬಾಡಿಗೆ ರೂಪದಲ್ಲಿ ಸಾಕಷ್ಟು ಆದಾಯ ಸಂಸ್ಥೆಗೆ ಬರಲಿದೆ. ಇದು ಮತ್ತಷ್ಟು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು. ಬಡವರಿಗೆ ದೊಡ್ಡ ತಲೆ ನೋವಾದ ವೈದ್ಯಕೀಯ ಸೇವೆ ಕಡಿಮೆ ದರದಲ್ಲಿ, ಗುಣಮಟ್ಟದ ಸೇವೆ ನೀಡಲು ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ದಸಿರಿ ಸೌಹಾರ್ದ ಸಹಕಾರಿ ಜಂಟಿಯಾಗಿ ಲೋಕಕಲ್ಯಾಣ ಟ್ರಸ್ಟ್ ಮೂಲಕ ಜೆ.ಎಸ್.ಎಸ್ ಆಸ್ಪತ್ರೆ ಆರಂಭಿಸಿ ಸೇವೆ ನೀಡಲಾಗುತ್ತಿದೆ. ಇದೀಗ ಜಿಲ್ಲೆಯಲ್ಲೇ ಪ್ರಥಮವಾಗಿ ೨೫೦ ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಈಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ದೂರದ ಊರಿಗೆ ಅಲೆಯುವ ತಾಪತ್ರೆಯ ತಪ್ಪಲಿದೆ ಎಂದು ಹೇಳಿದರು. ಇದೇ ವೇಳೆ ವಾರ್ಷಿಕ ಸಾಧಾರಣ ಸಭೆಯಲ್ಲಿ ಚರ್ಚಿಸಿದ ವಿಷಯ ಸಂಖ್ಯೆ-೫ ರಂತೆ, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು ೧೫ ರಿಂದ ೨೧ಕ್ಕೆ ಏರಿಸಲು ಸಂಪೂರ್ಣವಾದ ಅಧಿಕಾರವನ್ನು ಸಂಸ್ಥೆಯ ಅಧ್ಯಕ್ಷರಿಗೆ ವಹಿಸಿ, ಎಲ್ಲ ಸದಸ್ಯರು ಸರ್ವಾನುಮತದಿಂದ ಅಧಿಕಾರ ನೀಡಿದರು. ಅದರಂತೆ ಠರಾವು ಪಾಸು ಮಾಡಲಾಯಿತು. ಶ್ರೀ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ಇದ್ದರು.
![](https://karnataka1news.com/wp-content/uploads/2023/09/IMG-20230927-WA0005-1024x683.jpg)