ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ತಿದ್ದಾರೆ. ಸದ್ಯ ಕಿಮ್ಸ್ ವೈದ್ಯರು ಬಡ ರೋಗಿ ವೃದ್ಧರಿಗೆ ಬೆಡ್ ನೀಡದೆ ಚಿಕಿತ್ಸೆ ನೀಡುತ್ತಿದ್ದಾರೆ. ಹುಬ್ಬಳ್ಳಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಮಾತ್ರ ಇನ್ನೂ ಕೆಳಹಂತದ ಕರ್ಮಕಾಂಡದಲ್ಲಿ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಿಮ್ಸ್ ವೈದ್ಯರು ಬಡವರ ಆರೋಗ್ಯಕ್ಕೆ ಬೆಲೆಯನ್ನೇ ಕೊಡೋದಿಲ್ವಾ? ಎಂಬ ಪ್ರಶ್ನೆ ಎದ್ದಿದೆ. ಹಿರಿಯ ನಾಗರಿಕರ ಮೇಲೆ ಕಿಮ್ಸ್ ವೈದ್ಯರಿಗೆ ಯಾಕಿಷ್ಟು ನಿರ್ಲಕ್ಷ್ಯ ಅಂತ ಜನ ಮಾತಾಡಿಕೊಳ್ಳುವಂತಾಗಿದೆ. ದೂರದ ಊರಿನಿಂದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವೃದ್ಧರಿಗೆ, ಬೆಡ್ ನೀಡದೇ ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಲಾಗಿದೆ.
ಕುಂದಗೋಳ ತಾಲೂಕಿನ ಚೆನ್ನವ್ವ ಎಂಬ 67 ವರ್ಷದ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು. ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ್ದಾರೆ. ಗ್ಲೋಕೋಸ್ ಬಾಟಲಿ ಹಾಕಲು ಸ್ಟ್ಯಾಂಡ್ ಸಹ ನೀಡಿರಲಿಲ್ಲ. ಇದರಿಂದಾಗಿ ಚೆನ್ನವ್ವ ಸಂಬಂಧಿಕರು ಬಾಟಲಿಯನ್ನು ಕೈಯಲ್ಲಿ ಹಿಡಿದು ನಿಲ್ಲಬೇಕಾಯಿತು. ಕಿಮ್ಸ್ ವೈದ್ಯರುಗಳ ಅನಾಗರಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಕಿಮ್ಸ್ ಆಸ್ಪತ್ರೆಗೆ ಇಷ್ಟೊಂದು ಸೌಲಭ್ಯಗಳನ್ನು ನೀಡುತ್ತಿದ್ದರು ಕೂಡ ಇಲ್ಲಿನ ವೈದ್ಯರು ಮಾತ್ರ ನಿರ್ಲಕ್ಷ ತೋರುತ್ತಿದ್ದಾರೆ. ಆರೋಗ್ಯ ಸಚಿವರು ಇತ್ತ ಗಮನಸಿ ವೈದ್ಯರಿಗೆ ತಿಳಿ ಹೇಳಬೇಕಿದೆ.