ವಿಜಯಪುರ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಬೈಕ್ ಸವಾರನಿಗೆ 6 ತಿಂಗಳ ಶಿಕ್ಷೆ ಹಾಗೂ 1500 ರೂ. ದಂಡ ವಿಧಿಸಿ ವಿಜಯಪುರ 2ನೇ ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. ವಿಜಯಪುರದ ತೊನಶ್ಯಾಳ ಗ್ರಾಮದ ಮಹಾಂತೇಶ ಬಾಬು ಯಳವರ ಶಿಕ್ಷೆಗೊಳಗಾದ ಬೈಕ್ ಸವಾರ. 2020ರ ಜೂ. 14 ರಂದು ಸಂಜೆ 7 ಗಂಟೆಗೆ ಗ್ರಾಮದಲ್ಲಿ ಬೈಕ್ನಲ್ಲಿ ಬಂದಿದ್ದ. ಆಗ ಅಲ್ಲಿ ಸಂಜೆ ವಾಯುವಿಹಾರ ಮಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ಶಿವನಗೌಡ ಪಾಟೀಲ ಹಾಗೂ ಶಂಕರಗೌಡ ಬಿರಾದಾರ ಎಂಬುವರಿಗೆ ಬೈಕ್ ಡಿಕ್ಕಿ ಹೊಡೆಸಲು ಯತ್ನಿಸಿದ್ದ. ಇದರಿಂದ ಸಿಟ್ಟಾದ ವಾಯುವಿಹಾರಿಗಳು ಸವಾರನಿಗೆ ಬುದ್ದಿವಾದ ಹೇಳಿದ್ದರು.
ಇದರಿಂದಾಗಿ ಕುಪಿತಗೊಂಡ ಆರೋಪಿ, ಶಿವನಗೌಡ ಪಾಟೀಲ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದ ಎಂದು ಬಬಲೇಶ್ವರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆ ಅವಲೋಕಿಸಿ, ಆರೋಪಿ ಮೇಲಿನ ಆಪಾದನೆ ರುಜುವಾತಾಗಿದೆ ಎಂದು ತೀರ್ಮಾನಿಸಿ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ರಾಠೋಡ ಶಶಿಧರ ವಿಶ್ವನಾಥ ವಾದ ಮಂಡಿಸಿದ್ದರು.