ವಿಜಯಪುರ: ಪತ್ರಕರ್ತರೆಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇರಿಸಿದ್ದಲ್ಲದೇ ವ್ಯಾಪಾರಿಯೊಬ್ಬನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಪ್ರಕರಣವೊಂದು ಇಲ್ಲಿನ ಕೆಐಎಡಿಬಿಯ ಬಾಲಾಜಿ ಮೆಟಲ್ ಇಂಡಸ್ಟ್ರೀಜ್ನಲ್ಲಿ ಬೆಳಕಿಗೆ ಬಂದಿದೆ.
ಜೂ.24 ರಂದೇ ಘಟನೆ ನಡೆದಿದ್ದು ಇದೀಗ ಪ್ರಕರಣ ಬಯಲಾಗಿದೆ. ವಿವಿಧ ಚಾನಲ್ ಮತ್ತು ಪತ್ರಿಕೆ ಹೆಸರು ಹೇಳಿಕೊಂಡು ಹಣಕ್ಕೆ ಬೇಡಿಕೆ ಇರಿಸಿದ್ದ ನಾಲ್ವರು ಪ್ರಮುಖ ಆರೋಪಿಗಳು ಹಾಗೂ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಉದ್ಯಮಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳೀಯ ನಿವಾಸಿಗಳಾದ ರಿಜ್ವಾನ್ಅಹ್ಮದ್ ಮುಲ್ಲಾ, ಕಲ್ಮೇಶ ಶ್ಯಾಪೇಟಿ, ರಿಯಾಜ ಜಹಗೀರದಾರ್, ಮೈಬೂಬ ಸಾರವಾನ್ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಇಲ್ಲಿನ ಹಳೇಕುಂಬಾರಗಲ್ಲಿಯ ನಿವಾಸಿ ಶುಭಮ್ ಬಾಳಾಸಾಹೇಬ ವಾಡೇಕರ ಎಂಬುವರು ನಗರ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಬಾಲಾಜಿ ಮೆಟಲ್ಸ್ ಇಂಡಸ್ಟೀಜ್ ಸ್ಥಾಪಿಸಿದ್ದು ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದಾರೆ. ಈ ಫ್ಯಾಕ್ಟರಿಗೆ ಭೇಟಿ ನೀಡಿ ಆರೋಪಿತರು ತಾವು ಪೇಪರ್ನವರಿದ್ದು ನಿಮ್ಮ ಫ್ಯಾಕ್ಟರಿಯಲ್ಲಿ ಕೆಇಬಿ ವೈಯರ್ ಸುಡುತ್ತೀರಿ ಎಂಬ ಮಾಹಿತಿ ಬಂದಿದೆ ಎಂದು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೇ ತಾವು ಪ್ರೆಸ್ನವರು ಇದ್ದು ಪೇಪರ್ನಲ್ಲಿ ಹಾಕುತ್ತೇವೆ ಎಂದು ಭಯ ಹುಟ್ಟಿಸಿದ್ದಾರೆ. ಹಾಗೆ ಹಾಕಬಾರದೆಂದರೆ ಅದಕ್ಕೆ ಹಣ ಕೊಡಬೇಕೆಂದು ಬೇಡಿಕೆ ಇರಿಸಿದ್ದಾರೆ. ಅಲ್ಲದೇ ಈ ಮಕ್ಕಳದು ಪೇಪರ್ನಲ್ಲಿ ಹಾಕಿ ಬಿಡೋಣ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಾಗೆ ನಿಂದಿಸಬೇಡಿ ಎಂದು ವಿನಂತಿಸಲಾಗಿ ಒಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಉಳಿದವರು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಕಾರ್ಖಾನೆಯಲ್ಲಿದ್ದ ರಾಘವ ಸ್ವರ್ಗೆಸೂರ್ಯನಾರಾಯಣ ಝಾ, ರಾಜೇಶ ಹಣಮಂತ ಜಗತಾಪ ಇವರ ಮೇಲೂ ಹಲ್ಲೆ ನಡೆಸಲಾಗಿದೆ.
ಗಾಯಾಳು ಶುಭಮ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.