ವಿಜಯಪುರ: ನಡೆದಾಡುವ ದೇವರು ಖ್ಯಾತಿಯ ಸಿದ್ಧೇಶ್ವರ ಶ್ರೀಗಳ ಅನಾರೋಗ್ಯ ಹಿನ್ನೆಲೆ ವಿಜಯಪುರ ನಗರದ ಜ್ಞಾನಯೋಗಾಶ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ಸಿಎಂ ಬೊಮ್ಮಾಯಿ ಮಾತನಾಡಿ,
ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಕಳವಳಕಾರಿ ಎಂಬ ವಿಷಯ ತಿಳಿದು ಬಂದೆ. ಪ್ರತಿ ದಿನ ಅವರ ಆರೋಗ್ಯ ವಿಚಾರಿಸುತ್ತಲೇ ಇದ್ದೆ. ಕಳೆದೆರೆಡು ದಿನಗಳ ಹಿಂದೆ ಬಹಳಷ್ಟು ಮಾತನಾಡಲು ಆಗಲಿಲ್ಲ. ಹೀಗಾಗಿ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಪ್ರಲ್ಹಾದ ಜೋಶಿ ಅವರು ಬಂದಿದ್ದೇವೆ. ಆಧುನಿಕ ಕಾಲದಲ್ಲಿ ನಿಜವಾದ ವೈರಾಗ್ಯ ಜೀವಿಯನ್ನು ನೋಡುವ ಭಾಗ್ಯ ನಮ್ಮದಾಯಿತು. ಅವರ ಪ್ರತಿ ಬೋಧನೆ ನಮಗೆ ದಾರಿದೀಪ, ಮಾರ್ಗದರ್ಶನ ಆಗಿದೆ. ಅವರ ಮಾತು, ತತ್ವ ಕೇಳಿ ಬದಲಾಗಿದ್ದೇವೆ. ನನ್ನ ಬಳಿ ಹಲವಾರು ಬಾರಿ ರೈತಾಪಿ ವರ್ಗದ ಬಗ್ಗೆ ಚರ್ಚೆ ಮಾಡಿದ್ದಾರೆ. ನಾನು ಸಿಎಂ ಆದಾಗ ನಿಮ್ಮಿಂದ ನಾಡಿಗೆ ಒಳ್ಳೆಯದಾಗಲಿದೆ ಎಂದು ಹಾರೈಸಿದ್ದರು. ಇಂಥ ಆದರ್ಶವಾದಿಗಳು ಹತ್ತು ಇಪ್ಪತ್ತು ಕೋಟಿಗೆ ಒಬ್ಬರು ಸಿಗುತ್ತಾರೆ. ಪೂಜ್ಯರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅರವಿಂದ ಬೆಲ್ಲದ, ರಮೇಶ ಭೂಸನೂರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.