ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ ನಗರದ ರೇಡಿಯೋ ಮೈದಾನದಲ್ಲಿ ನಿರ್ಮಿಸಿದ ನಗರ ಕೇಂದ್ರ ಗ್ರಂಥಾಲಯ ನೂತನ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನವಾಗಿ ನಿರ್ಮಿಸಲಾದ ನಗರ ಕೇಂದ್ರ ಗ್ರಂಥಾಲಯದಲ್ಲಿ ಅವಶ್ಯವಿರುವ ಪೀಠೋಪಕರಣಗಳ ವ್ಯವಸ್ಥೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನೂತನ ಗ್ರಂಥಾಲಯಕ್ಕೆ ಒಂದು ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣ ವ್ಯವಸ್ಥೆಗೆ ಅನುದಾನ ಹೊಂದಿಸುವುದು, ನೂತನ ಕಟ್ಟಡದ ಮುಂಭಾಗದಲ್ಲಿರುವ ಗಾರ್ಡನ್ ಬಳಸಿಕೊಂಡು ಗ್ರಂಥಾಲಯಕ್ಕೆ ಆಗಮಿಸುವ ಓದುಗರಿಗೆ ಅನುಕೂಲ ಕಲ್ಪಿಸುವುದು, ಗ್ರಂಥಾಲಯ ಸಮಯವನ್ನು ವಿಸ್ತರಿಸುವುದು ಸೇರಿದಂತೆ ನಗರದ ಮಧ್ಯಭಾಗದಲ್ಲಿರುವ ಹಳೆಯ ಗ್ರಂಥಾಲಯ ಕಟ್ಟಡದ ಪರ್ಯಾಯ ಉಪಯೋಗ ಕುರಿತು ಚರ್ಚಿಸಿದರು. ಜಿಲ್ಲೆಯ ಮುದ್ದೇಬಿಹಾಳ, ಇಂಡಿ ಸೇರಿದಂತೆ ತಾಲೂಕಾ ಮಟ್ಟದಲ್ಲಿರುವ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಾಗೂ ಸಂಚಾರಿ ಗ್ರಂಥಾಲಯ ಅನುಪಯುಕ್ತವಾಗಿರುವುದರಿಂದ ವಿಲೇವಾರಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ.ಪಾಟೀಲ, ಸಹಾಯಕ ಅಭಿಯಂತರ ರವಿ ಪವಾರ, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಪಾಟೀಲ ಸೇರಿದಂತೆ ಇಲಾಖೆಯ ಮಂಜುನಾಥ ಹೆಬ್ಬಳ್ಳಿ, ಮುತ್ತಿನ, ಬಕ್ಷಿ, ಸಂಗಮ, ವೀರಭದ್ರ, ಗಣಾಚಾರಿ ಇತರರು ಉಪಸ್ಥಿತರಿದ್ದರು.
![](https://karnataka1news.com/wp-content/uploads/2023/08/IMG-20230823-WA0036-1024x768.jpg)