ವಿಜಯಪುರ: ವಿಜಯಪುರ ನಗರದ ಸೈನಿಕಶಾಲೆ ಮೈದಾನದಲ್ಲಿ 2023ರ ಜನವರಿ 15ರಂದು ಆಯೋಜಿಸಲಾದ ಯೋಗಾಥಾನ್ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಯೋಗಾಥಾನ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 32 ಸಾವಿರ ಜನರು ನೋಂದಾಯಿಸಿಕೊಂಡಿದ್ದು, ಯೋಗ ಪಟುಗಳ ಆಸೀನರಾಗಲು ಸ್ಥಳಾವಕಾಶದ ಕುರಿತು ನೀಲಿ ನಕ್ಷೆ ಸಿದ್ಧಪಡಿಸಬೇಕು. ಪ್ರತಿ ಸಾವಿರ ಜನರಿಗೆ ಒಂದು ಬ್ಲಾಕ್ ಮಾಡಬೇಕು. ಚಿಕ್ಕ-ಚಿಕ್ಕ ಸ್ಟೇಜ್ ನಿರ್ಮಾಣ ಮಾಡಿಕೊಳ್ಳಬೇಕು. ಜನಸಂದಣಿಯಾಗದಂತೆ ನೋಡಿಕೊಳ್ಳಲು 4 ಪ್ರವೇಶ ದ್ವಾರಗಳನ್ನು ತೆರೆಯಬೇಕು. ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಶಾಲಾ-ಕಾಲೇಜಿನ ಹೆಸರುಳ್ಳ ಬೋರ್ಡಗಳನ್ನು ಪ್ರದರ್ಶಿಸಬೇಕು. ಕುಡಿಯುವ ನೀರು, ಮೊಬೈಲ್ ಶೌಚಾಲಯ, ಮಕ್ಕಳಿಗಾಗಿ ವಾಹನ ವ್ಯವಸ್ಥೆ, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ 25 ಸಾವಿರ ಜನರಿಗೆ ಅಲ್ಪೋಪಹಾರ ಆಹಾರ ಇಲಾಖೆ ವತಿಯಿಂದ ವ್ಯವಸ್ಥೆ ಕೈಗೊಳ್ಳಬೇಕು.ಪ್ರತಿ 400 ಜನರಿಗೆ ಓರ್ವ ತರಬೇತುದಾರ ನೇಮಿಸಬೇಕು. ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ 50 ಜನರಿಗೆ ಓರ್ವ ಎನ್ಸಿಸಿ ಕೆಡೆಟ್ ನೇಮಿಸಬೇಕು. ಕಾರ್ಯಕ್ರಮ ದಿನದಂದು ಮುಖ್ಯ ವೇದಿಕೆ, ಧ್ವನಿವರ್ಧಕ, ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕಾರ್ಯಕ್ರಮ ಯಶಸ್ವಿಗೆ ಎಲ್ಲ ಸಿದ್ಧತೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೈಗೊಳ್ಳುವಂತೆ ಸೂಚನೆ ನಿಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ,ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಆಹಾರ ಇಲಾಖೆ ಉಪನಿರ್ದೇಶಕ ಸಿದರಾಮ ಮಾರಿಹಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್.ಲಕ್ಕಣ್ಣವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಎನ್.ಸಿ.ಸಿ.ಅಧಿಕಾರಿ ಅಹಮ್ಮದ, ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ ಮುಲ್ಲಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ.ಲೋಣಿ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.