ವಿಜಯಪುರ: ಗುಮ್ಮಟನಗರಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ವಿಜಯಪುರದ ಶಕ್ತಿ ಕ್ರಾಸ್ ಬಳಿ ದಾರಿಹೋಕರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ಮತ್ತು ಚಾಕು ತೋರಿಸಿ ಹಣ ಹಾಗೂ ಬೆಲೆ ಬಾಳುವ ಸಾಮಗ್ರಿ ಲೂಟಿ ಮಾಡುತ್ತಿದ್ದ ಐವರ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ತಾಪ ಅಮೀನಸಾಬ ಮನಗೂಳಿ (21), ನಬಿರಸೂಲ ಊರ್ಫ್ ಟಾಡಾ ದಸ್ತಗೀರ ಘೋಡೆಸವಾರ (33), ಮಹ್ಮದ್ಸೈಪ್ ಜಾವೀದ ಸೌದಾಗರ (19) ಬಂಧಿತ ಆರೋಪಿಗಳು. ಸಲ್ಮಾನ ಏಜಾಜ ಖಾನ ಹಾಗೂ ಸೊಹೇಬ ರುಕಮೋದ್ದಿನ ತಾಳಿಕೋಟಿ ಪರಾರಿಯಾಗಿದ್ದಾರೆ.
ಕಾರ್ಯಾಚರಣೆ ಹೇಗಿತ್ತು ಗೊತ್ತಾ..?
ಗಾಂಧಿ ಚೌಕ್ ಠಾಣೆ ಪಿಎಸ್ಐ ಬಿ.ಎಂ. ರಬಕವಿ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಸ್ಯಾಟ್ಲೈಟ್ ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಫೋನ್ ಕರೆ ಬಂದಿದ್ದು, ಯಾರೋ 4-5ಜನ ರಸ್ತೆಗೆ ನಿಂತು ಹಗ್ಗ ಹಿಡಿದು ಹೋಗಿ ಬರುವ ವಾಹನ ಸವಾರರು ಮತ್ತು ಜನರನ್ನು ಅಡ್ಡಗಟ್ಟಿ ನಿಲ್ಲಿಸಿ ಕಬ್ಬಿಣದ ರಾಡ್ ತೋರಿಸಿ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಮಾಹಿತಿ ಆಧರಿಸಿ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಪಿಎಸ್ಐ ರಬಕವಿ ಹಾಗೂ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗಿಳಿದ್ದು, ಆರೋಪಿಗಳ ಬಂಧಿಸಿದ್ದಾರೆ. ಕಿರಾತಕರನ್ನು ಬಂಧಿಸಿ ಅವರಿಂದ ಎರಡು ಕಬ್ಬಿಣದ ರಾಡ್, ಒಂದು ನೂಲಿನ ಹಗ್ಗ, ಒಂದು ಚಾಕು, ಖಾರದ ಪುಡಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.