ವಿಜಯಪುರ: ನಕಲಿ ಮತದಾರರ ಗುರುತಿನ ಚೀಟಿ ತಯಾರಿಸಿ ನೀಡುತ್ತಿದ್ದ ನೆಟ್ ಸೆಂಟರ್ ಅಂಗಡಿಯ ಮೇಲೆ ತಹಶೀಲ್ದಾರ ನೇತೃತ್ವದ ತಂಡ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
ಶ್ರೀ ಸಿರಾಜ್ ನೆಟ್ ಸೆಂಟರ್ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿಗೈದು ಆರೋಪಿ ಅಂಡಗಿಯ ಮಾಲೀಕ ಸಿರಾಜ್ ನದಾಫ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಕಂಪ್ಯೂಟರ್, ಪ್ರಿಂಟರ್ ಸಾಮಗ್ರಿಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿಗೈದಿದ್ದಾರೆ. ಇನ್ನು ಚಡಚಣ ತಾಲೂಕಿನ ಲೋಣಿ ಬಿಕೆ ನಿವಾಸಿಯಾದ ಮಚ್ಚೇಂದ್ರ ಕಾಂಬ್ಳೆಗೆ ನಕಲಿ ಗುರುತಿನ ಚೀಟಿ ತಯಾರಿಸಿ ಸಿರಾಜ್ ಸೆಂಟರ್ ನವರು ನೀಡಿದ್ದಾರೆ.
ಆದ್ರೇ, ಮಚ್ಚೇಂದ್ರ ತಹಶೀಲ್ದಾರ ಕಚೇರಿಗೆ ತೆರಳಿ ಗುರುತಿನ ಚೀಟಿ ನಡೆಯುತ್ತಿಲ್ಲ. ಬದಲಾಗಿ ಬೇರೆದು ನೀಡುವಂತೆ ಮನವಿ ಮಾಡಿದ್ದು, ಈ ವೇಳೆಯಲ್ಲಿ ಗುರುತಿನ ಚೀಟಿ ಅನುಮಾಸ್ಪದ ರೀತಿಯಲ್ಲಿ ಕಂಡು ಬಂದಿದೆ. ಅದಕ್ಕಾಗಿ ತಹಶೀಲ್ದಾರ ಕಚೇರಿಯ ಅಧಿಕಾರಿಗಳು ವಿಚಾರಣೆ ಮಾಡಿದಾಗ ನಕಲಿ ಮತದಾರರ ಚೀಟಿ ಎಂದು ಪತ್ತೆಯಾಗಿದೆ. ಈ ಕುರಿತು ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.