ವಿಜಯಪುರ: ಪ್ರಧಾನಿ ಮೋದಿ ಕರ್ನಾಟಕ ರಾಜ್ಯ ಭೇಟಿಯನ್ನು ಖೋ ಖೋ ಕ್ರೀಡೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೋಲಿಸಿದರು. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಮೋದಿ ಬರ್ತಾರೆ, ಹೋಗ್ತಾರೆ. ಅದು ಲಗೋರಿ ಆಟನಾ, ಖೋ ಖೋ ಆಟನಾ ಎಂದು ವ್ಯಂಗ್ಯ ಮಾಡಿದರು. ಅಲ್ಲದೇ, ಹಿಂದೆ ಆಡ್ತಿದ್ದರಲ್ಲ, ಖೋ ಖೋ ಆಟದಂತೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರೋದು ಆಗಿದೆ ಎಂದರು.
ಖೋ ಕೊಡೋದು ಮತ್ತೇ ಹೋಗೋದು, ಮತ್ತೇ ಬರೋದು ಮಾಡ್ತಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಎಂದೂ ರಾಜ್ಯದ ಸಮಸ್ಯೆಗೆ ಸ್ಪಂದಿಸಿಲ್ಲ. ನದಿ ನೀರು ಹಂಚಿಕೆಗೆ ನಿರ್ಲಕ್ಷ್ಯ ಮಾಡಿ ಏತಕ್ಕೆ ಮತ ಕೇಳೋಕೆ ಬರ್ತಾರೆ ಅಂತ ಪ್ರಶ್ನಿಸಿದರು. ನದಿ ನೀರು ಬಳಕೆ ಮಾಡೋಕೆ ಅವಕಾಶ ಕೊಡುತ್ತಿಲ್ಲ ಇದು ಬಿಜೆಪಿ ಆಡಳಿತ ಆಗಿದೆ. ವಿಜಯಪುರದಲ್ಲಿ ನೀರಿದೆ. ಒಣಭೂಮಿ ಪ್ರದೇಶವಿದೆ. ಕೆಲ್ಸ ಮಾಡದೇ ಬಂದ್ರೆ ಜನ ಮೆಚ್ಚಿಕೊಳ್ತಾರಾ.? ಕರ್ನಾಟಕದ ಜನತೆ ಬಹಳ ಬುದ್ಧಿವಂತರಿದ್ದಾರೆ. ಜನ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕೆಂದು ಜನರಲ್ಲಿ ಅಂಡರ್ ಕರೆಂಟ್ ಪಾಸ್ ಆಗ್ತಿದೆ. ಅದಕ್ಕೆ ಪಂಚರತ್ನ ರಥಯಾತ್ರೆ ಮೂಲ ಎಂದರು.