ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಕಾರು ಪರಸ್ಪರ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರು ಮತ್ತು ಗಾಯಾಳುಗಳು ಸಹ ಒಂದೇ ಕುಟುಂಬದವರಾಗಿದ್ದು, ಬಂಧುಗಳಾಗಿದ್ದಾರೆ. ಮೃತಪಟ್ಟವರನ್ನು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬರಟಗಿ ತಾಂಡಾದ ವಾಸಿಯಾದ ಅರ್ಜುನ ಕುಶಾಲಸಿಂಗ್ ರಜಪೂತ (32), ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ನಿವಾಸಿಯಾದ ರವಿನಾಥ ಸುನಿಲಾಲ್ ಪತ್ತಾರ ( 52 ), ಪುಷ್ಟಾ ರವಿನಾಥ ಪತ್ತಾರ ( 40) ಹಾಗೂ ಮುಧೋಳ ಪಟ್ಟಣದ ವಾಸಿ ಮೇಘರಾಜ ಅರ್ಜುನಸಿಂಗ್ ರಜಪೂತ (12) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇವರನ್ನು ಜಯಶ್ರೀ ಅರ್ಜುನ ರಜಪೂತ, ನಯಾರಾ ಅರ್ಜುನ ರಜಪೂತ ಹಾಗೂ ಪ್ರೇಮಸಿಂಗ್ ಅರ್ಜುನ ರಜಪೂತ ಎಂದು ಗುರುತಿಸಲಾಗಿದೆ. ಮೃತಪಟ್ಟವರು ಮತ್ತು ಗಾಯಾಳುಗಳು ಪರಸ್ಪರ ಬಂಧುಗಳಾಗಿದ್ದು, ಇವರೆಲ್ಲ ಮೂಲತಃ ವಿಜಯಪುರದ ಬರಟಗಿ ತಾಂಡಾದವರು ಎಂದು ಬಂಧುಗಳು ಮಾಹಿತಿ ನೀಡಿದ್ದಾರೆ. ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA 28 D 1021 ನಂಬರಿನ ಕಾರಿನಲ್ಲಿ ಈ ಏಳೂ ಜನರು ತೆರಳುತ್ತಿದ್ದರು. ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಬಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಅಪಘಾತದ ಭೀಕರತೆಗೆ ಸಾಕ್ಷಿಯಾಗಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನ ಹೊರತೆಗೆದಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಶಂಕರ ಮಾರಿಹಾಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನ ಮರಣೋತ್ತರ ಪರೀಕ್ಷೆಗೆಂದು ವಿಜಯಪುರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಗಾಯಾಳುಗಳಲ್ಲಿ ನಯರಾ ಎನ್ನುವ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ಅರ್ಜುನ ಮತ್ತು ರವಿನಾಥ ಇಬ್ಬರೂ ಬ್ಯಾಂಕ್ ಸಿಬ್ಬಂದಿಗಳಾಗಿದ್ದು, ವರಸೆಯಲ್ಲಿ ಅಳಿಯ ಮಾವ ಆಗಿದ್ದಾರೆ. ಮಾವ ರವಿನಾಥನಿಗೆ ವಿಜಯಪುರಕ್ಕೆ ವರ್ಗವಾಗಿದ್ದು, ಅವರ ಮನೆಯ ವಸ್ತುಗಳನ್ನ ಮುಧೋಳದಿಂದ ವಿಜಯಪುರಕ್ಕೆ ಶಿಫ್ಟ್ ಮಾಡಲೆಂದು ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಬಂಧುಗಳು ಮಾಹಿತಿ ನೀಡಿದ್ದಾರೆ.