ವಿಜಯಪುರ: ಮಾಜಿ ಸಚಿವ ಉಮೇಶ ಕತ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಗೆಲ್ಲಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಲಕ್ಷ್ಮಣ ಸವದಿ ಹೀಗೆ ಅನೇಕ ಲಿಂಗಾಯತ ನಾಯಕರನ್ನು ಜೊತೆಗೆ ಕರೆದುಕೊಂಡು ರಾಜಕಾರಣ ಮಾಡಿದ್ದೇನೆ. ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಲ್ವರ್ಗದವರನ್ನು ತಲೆ ಮೇಲೆ ಹೊತ್ತು ರಾಜಕಾರಣ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಡಿಎಸ್ಎಸ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನಾನೂ ಅದೇ ಸಮಾಜದಿಂದ ಬಂದಿದ್ದೇನೆ. ಆದರೆ, ಕೆಲವು ಡಿಎಸ್ಎಸ್ನವರು ಮಾಡಿದ ತಪ್ಪಿನ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೇ ನಾನು ಪುನರುಚ್ಚರಿಸಿದ್ದೇನೆ. ಅಲ್ಲದೇ, ಬಿಜೆಪಿಯ ಚಿಂತೆ ರಾಜು ಆಲಗೂರಗೆ ಏಕೆ? ಅವರ ಪಕ್ಷದ ಬಗ್ಗೆ ಅವರು ನೋಡಿಕೊಳ್ಳಲಿ. ಸೋಲಿನ ಹತಾಶೆಯಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅವಕಾಶ ತಪ್ಪಿಸಲು ನಾನು ಯಾರು? ಯತ್ನಾಳ ಅವರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಜೊತೆ ಇದ್ದಾಗ ವೆಂಕಯ್ಯ ನಾಯ್ಡು, ಪ್ರಮೋದ ಮಹಾಜನ್ ಮತ್ತಿತರರು ಕರೆದು ವಾಜಪೇಯಿ ಅವರ ಜೊತೆ ಬರಬೇಕೆಂದು ಹೇಳಿದರು. ಯತ್ನಾಳರು ಮಂತ್ರಿ ಆಗುವಾಗಲೂ ನಾನು ಬೆಂಬಲಿಸಿದ್ದೇನೆ. ರವಿಕಾಂತ ಅವರನ್ನು ಹತ್ತಿಕ್ಕೇದ್ದೇನೆ ಎಂಬುದು ಸುಳ್ಳು ಎಂದರು.