ವಿಜಯಪುರ: ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಕುಮಾರಸ್ವಾಮಿ ಸಿಎಂ ಆಗದಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗ್ತಿನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ವಿಜಯಪುರ ನಗರದ ದರ್ಬಾರ್ ಮೈದಾನದಲ್ಲಿ ಶುಕ್ರವಾರ ನಡೆದ ಪಂಚರತ್ನ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಇದನ್ನು ಕಾಂಗ್ರೆಸ್, ಬಿಜೆಪಿಯವರು ಈ ಚಾಲೆಂಜ್ ತಗೋತಿರಾ ಎಂದು ಕೇಳಿದರು. ಕಾಂಗ್ರೆಸ್ ನವರು ಜೋಡೋ ಯಾತ್ರೆ ಮಾಡ್ತಿದ್ದಾರೆ. ನಿಮ್ಮಲ್ಲಿಯೇ ಜೋಡೋ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಜೋಡೋ ಯಾತ್ರೆಗೆ ಯಾವುದೇ ಗೊತ್ತು ಗುರಿ ಇಲ್ಲ. ಬಿಜೆಪಿ ಸರ್ಕಾರ ನೋಡಿ ವಾಂತಿ ಬರ್ತಿದೆ. ಮೋದಿ ಇರುವ ಜಾಗಕ್ಕೆ ಜನ ಕರೆದುಕೊಂಡು ಹೋಗುತ್ತಿದ್ದಾರೆ. ಕುಮಾರಸ್ವಾಮಿ ರೈತರು ಇರುವ ಜಾಗಕ್ಕೆ ಹೋಗ್ತಿದ್ದಾರೆ. ಇದರಲ್ಲಿ ಯಾರು ದೊಡ್ಡವರು ನೀವೇ ಹೇಳಿ. ಫೆಬ್ರವರಿ ಮುಗಿಯಲಿ, ಬೇರೆ ಪಕ್ಷದವರು ಬರೋರನ್ನು ಹೇಳ್ತೀನಿ ಎಂದು ಬಾಂಬ್ ಸಿಡಿಸಿದರು.