ವಿಜಯಪುರ: ಮಾಜಿ ಡಿಸಿಎಂ ಜಿ. ಪರಮೇಶ್ವರ ಒಳ್ಳೆಯ ರಾಜಕಾರಣಿ ಆಗಿದ್ದಾರೆ. ಅವರು ಸಿಎಂ ಆಗುವ ಹೇಳಿಕೆಯನ್ನು ವಿಜಯಪುರದಲ್ಲಿ ಶನಿವಾರ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಸಮರ್ಥಿಸಿಕೊಂಡರು. ನಮ್ಮದ್ದು ಅಧಿಕಾರಕ್ಕಾಗಿ ಹೋರಾಟ ಇಲ್ಲ.
ನಮ್ಮ ಹೋರಾಟ ಇರೋದು ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಸರ್ಕಾರದ ವಿರುದ್ಧ ಆಗಿದೆ. ಅಲ್ಲದೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಹೋರಾಟ ಇದೆ. ಇನ್ನೂ ಅಧಿಕಾರಕ್ಕಾಗಿ ಆಸೆ, ಇಚ್ಛೆ ಇಟ್ಟುಕೊಳ್ಳುವುದು ತಪ್ಪು ಅಲ್ಲ. ನಮ್ಮ ಎಲ್ಲರ ಒಂದೇ ಗುರಿಯಾಗಿದೆ ಅದು ಬ್ರ್ಯಾಂಡ್ ಕರ್ನಾಟಕ ಆಗಿದೆ ಎಂದರು.
ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ನನಗೆ ವಿಶೇಷ ಅಧಿಕಾರ ಇಲ್ಲ. ಎಲ್ಲ ನಾಯಕರು ಒಗ್ಗಟ್ಟಾಗಿ ನಿರ್ಧಾರ ಮಾಡುತ್ತಾರೆ. ಸತೀಶ ಜಾರಕಿಹೊಳಿ, ಎಂಬಿ ಪಾಟೀಲ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ಮಾಡ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿ ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಎಲ್ಲ ಆಯಾಮಗಳನ್ನು ಪರಿಗಣಿಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು, ಆದಷ್ಟು ಬೇಗ ಅಭ್ಯರ್ಥಿಗಳನ್ನು ಚುನಾವಣೆ ಆಖಾಡಕ್ಕೆ ಇಳಿಸುತ್ತೇವೆ ಎಂದರು. ಅಭ್ಯರ್ಥಿಗಳನ್ನು ಬೇಗ ಕಣಕ್ಕಿಳಿಸುವ ಅಗತ್ಯವಿದೆ. ಈ ಚುನಾವಣೆ ಇಬ್ಬರ ನಡುವೆ ನಡೆಯುತ್ತಿದೆ ಎನ್ನುವ ಮೂಲಕ ಜೆಡಿಎಸ್ ಪಕ್ಷಕ್ಕೆ ಲೆಕ್ಕಕ್ಕಿಲ್ಲ ಎನ್ನುವ ದಾಟಿಯಲ್ಲಿ ಮಾತನಾಡಿದರು. ಕರ್ನಾಟಕದ ಜನ ಹಾಗೂ ಕಾಂಗ್ರೆಸ್ ಒಂದು ಕಡೆ ಇದೆ.
ಭ್ರಷ್ಟಚಾರ ಬೊಮ್ಮಾಯಿ ಸರ್ಕಾರ ಮತ್ತೊದು ಕಡೆ ಇದೆ ಎಂದು ಮಾರ್ಮಿಕವಾಗಿ ನುಡಿದರು. ಮಹಾಶಿವರಾತ್ರಿಯಂದು ಕೆಟ್ಟದನ್ನು ಹೋಗಲಾಡಿಸ ಲಾಗುತ್ತದೆ, ಕರ್ನಾಟಕದಲ್ಲೂ ಬೊಮ್ಮಾಯಿ ಭ್ರಷ್ಟ ಸರ್ಕಾರ ಹೋಗಲಾಡಿಸಲಾಗುತ್ತದೆ. ಚುನಾವಣೆ ಮತದಾನದ ಮೂಲಕ ಕೆಟ್ಟದನ್ನು ಜನರು ತೆಗೆಯಲಿದ್ದಾರೆ ಎಂದರು.