ವಿಜಯಪುರ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಪಂಚಾಯತಿ ಎದುರು ಶನಿವಾರ ನಡೆದಿದೆ. ಚಡಚಣ ಪಟ್ಟಣ ಪಂಚಾಯತ ಜೂನಿಯರ್ ಪ್ರೋಗ್ರಾಮರ್ ನಾಗರಾಜ್ ಕುಲಕರ್ಣಿ ಹಾಗೂ ದ್ವಿತೀಯ ದರ್ಜೆಯ ಸಹಾಯಕ ಶಿವಾನಂದ ಜಂಗಲಗಿ ಲೋಕಾಯುಕ್ತ ಬಲೆಗೆ ಬಿದ್ದವರು. ಇನ್ನೂ ಮನೆ ಕಟ್ಟಡದ ಪರವಾನಗಿಗಾಗಿ ಮೊದಲು 20 ಸಾವಿರ ಲಂಚ ಪಡೆದುಕೊಂಡಿದ್ದಾರೆ. ತದನಂತರ ಮತ್ತೆ 7 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೇ, ಏಳು ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಮಾರ್ಗದರ್ಶನದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಕುರಿತು ವಿಜಯಪುರ ಲೋಕಾಯುಕ್ತ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.