ಬಾಗಲಕೋಟ: ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡು ಬಂದು ವ್ಯಕ್ತಿ ಘಟಪ್ರಭಾ ನದಿಗೆ ಜಿಗಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಅನಗವಾಡಿ ಬಳಿಯ ಘಟಪ್ರಭಾ ನದಿಯಲ್ಲಿ ನಡೆದಿದೆ.
ವೀರಾಪುರದ ನಿವಾಸಿ ಚೆನ್ನಬಸಪ್ಪ ಯಲಗಣ್ಣವರ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಗೆ ಹಾರಿದ್ದರು. ಚೆನ್ನಬಸಪ್ಪ ನದಿಗೆ ಹಾರಿದ್ದನ್ನು ಗಮನಿಸಿದ ಕುರಿಗಾಹಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಹಗ್ಗ ಮತ್ತು ಟ್ಯೂಬ್ ಬಳಸಿ ಚೆನ್ನಬಸಪ್ಪನನ್ನು ನದಿಯಿಂದ ಹೊರಗೆಳೆದು ರಕ್ಷಿಸಿದ್ದಾರೆ.