ವಿಜಯಪುರ: ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಗರ್ಭಿಣಿ ಆಸ್ಪತ್ರೆ ಎದುರೇ ಹೆರಿಗೆ ಆಗಿರುವ ಘಟನೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕಾವೇರಿ ಎಂಬುವ ಗರ್ಭಿಣಿಗೆ ಹೆರಿಗೆ ಆಗಿದೆ. ಬಸವನಬಾಗೇವಾಡಿಯಿಂದ ವಿಜಯಪುರ ಜಿಲ್ಲಾಸ್ಪತ್ರೆ ಆವರಣಕ್ಕೆ ಆಗಮಿಸಿದ್ರೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಆವರಣದಲ್ಲಿಯೇ ಹೆರಿಗೆ ಆಗಿದೆ. ಇದರಿಂದ ಸ್ಥಳೀಯರು ಸರ್ಕಾರ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳ ಸಿಗುತ್ತವೆ. ಆದ್ರೂ, ಆಸ್ಪತ್ರೆಯ ಸಿಬ್ಬಂದಿಗಳು ಈ ತರಹ ನಿರ್ಲಕ್ಷ್ಯ ವಹಿಸಿದ್ರೇ ಬಡ ರೋಗಿಗಳು, ಗರ್ಭಿಣಿಯ ಆರೋಗ್ಯದ ಕಾಳಜಿಗೆ ಹೊಣೆ ಯಾರು ಎಂದು ಸ್ಥಳೀಯರು ಕಿಡಿಕಾರಿದರು. ಈ ಬಗ್ಗೆ ಜಿಲ್ಲಾ ಸರ್ಜನ್ ಅವರಿಗೆ ಕೇಳಿದ್ರೇ ಒಂದೊಂದು ಸಲ ಈ ತರಹ ಘಟನೆ ಆಗುತ್ತವೆ. ಆದ್ರೇ, ತಾಯಿ ಹಾಗೂ ಮಗು ಸುರಕ್ಷಿತವಾಗಿ, ಆರೋಗ್ಯವಾಗಿ ಇದ್ದಾರೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದರು. ಒಟ್ಟಿನಲ್ಲಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಹಲವು ಬಿರುದುಗಳನ್ನು ಪಡೆದುಕೊಂಡಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ರೋಗಿಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂದು ಸ್ಥಳೀಯರು, ರೋಗಿಗಳು ಆಗ್ರಹಿಸಿದ್ದಾರೆ.