ವಿಜಯಪುರ: ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಚಾರ ಸಾಮಗ್ರಿಗಳನ್ನು ದೃಢೀಕರಣವಿಲ್ಲದೇ ಮುದ್ರಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ, ಅವರು, ಚುನಾವಣೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿಗಳು, ಯಾವುದೇ ಕರಪತ್ರಗಳಲ್ಲಿ ಆಕ್ಷೇಪಾರ್ಹ ಅಂಶಗಳು ಒಳಗೊಂಡಿರಬಾರದು ಚುನಾವಣಾ ನಿಯಮದಂತೆ ಮುದ್ರಕರು ಪರಿಶೀಲಿಸಿ, ನಿಗದಿಪಡಿಸಿದ ನಮೂನೆ-ಎ ಹಾಗೂ ನಮೂನೆ-ಬಿ ಯಲ್ಲಿ ದೃಢೀಕರಿಸಿಕೊಳ್ಳಬೇಕು. ಬ್ಯಾನರ್, ಫೊಸ್ಟರ್, ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಬೇಕು.ಗುರುತಿನ ದೃಡೀಕರಣವಿಲ್ಲದೇ ಮುದ್ರಣ ಮಾಡಬಾರದು. ಕರಪತ್ರ ಫೊಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಮೊಬೈಲ್ ಸಂಖ್ಯೆ, ಮತ್ತು ಮುದ್ರಣ ಪ್ರತಿಗಳನ್ನು ಸಂಖ್ಯೆ ನಮೂದಿಸಬೇಕು. ನಿಯಮ ಉಲ್ಲಂಘನೆಯಾದರೆ ಪ್ರಜಾಪ್ರತಿ ನಿಧಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ಸುವಿಧಾ ಹಾಗೂ ಸಿ-ವ್ಹಿಜಿಲ್ ತಂತ್ರಾಂಶವನ್ನು ಹೆಚ್ಚೆಚ್ಚು ಬಳಸಿಕೊಂಡು ಅತ್ಯಂತ ಸರಳವಾಗಿ ವಿವಿಧ ಅನುಮತಿ ಪಡೆಯಬಹುದಾಗಿದ್ದು, ಇದರಿಂದ ಸಮಯವೂ ಸಹ ವ್ಯರ್ಥವಾಗುವುದಿಲ್ಲ. ಚುನಾವಣೆಗೆ ಸಂಬಂಧಿಸಿದ ದೂರುಗಳಿಗಾಗಿ 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಈ ಸಹಾಯವಾಣಿ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚಿನ ಮತದಾರರಿರುವ 16 ಮತಗಟ್ಟೆಗಳಿರುವುದರಿಂದ ಅದೇ ಕಟ್ಟಡದಲ್ಲಿ ಹೆಚ್ಚುವರಿಯಾಗಿ ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವಿಎಂ ಮತಯಂತ್ರಗಳ ಈಗಾಗಲೇ ಮೊದಲನೇ ರ್ಯಾಂಡಮೈಜೇಶನ್ ಪೂರ್ಣಗೊಳಿಸಿ, ಜಿಲ್ಲೆಯ 8 ಮತಕ್ಷೇತ್ರಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ರವಾನಿಸಲಾಗಿದೆ. ಎರಡನೇ ರ್ಯಾಂಡಮೈಜೇಶನ್ ಆಯಾ ಮತಕ್ಷೇತ್ರದಲ್ಲಿ ಆಯಾ ಚುನಾವಣಾಧಿಕಾರಿಗಳ ಹಂತದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು 40ಲಕ್ಷ ರೂ. ಆಯೋಗ ನಿಗದಿಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ದರಪಟ್ಟಿಗಳನ್ನು ಈಗಾಗಲೇ ಸಲ್ಲಿಸಲಾಗಿದೆ. 2072ರ ಮತಗಟ್ಟೆಗಳ ಪೈಕಿ 1036 ಮತಗಟ್ಟೆಗಳ ವೆಬ್ಕಾಸ್ಟಿಂಗ್ ನಡೆಸಲಾಗುವುದು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಿರಂತರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಿಕೊಳ್ಳಬೇಕು. ಪ್ರತಿಯೊಬ್ಬರು ಚುನಾವಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅನಾವಶ್ಯಕ ದೂರುಗಳಿಗೆ ಆಸ್ಪದ ನೀಡಬಾರದು. ಚುನಾವಣಾ ಸಂದರ್ಭ ಇರುವುದರಿಂದ ಅಧಿಕಾರಿಗಳು ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಯಾವುದೇ ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಗಮನಕ್ಕೆ ತರುವಂತೆ ಅವರು ಸಲಹೆ ನೀಡಿದರು.
80 ವರ್ಷ ಮೇಲ್ಪಟ್ಟ 38727 ಮತದಾರರು : ಪ್ರಸ್ತುತ ಜಿಲ್ಲೆಯಲ್ಲಿ ಇ.ಆರ್.ಓ.ನೆಟ್ ತಂತ್ರಾಶದ ಪ್ರಕಾರ ಒಟ್ಟು 38,727 ಜನ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ 20273 ವಿಶೇಷ ಚೇತನ ಮತದಾರರಿದ್ದಾರೆ. ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಪ್ರೇರೆಪಿಸಬೇಕು. ಅದ್ಯಾಗ್ಯೂ ಮತಗಟ್ಟೆಗೆ ಬಾರದಿರುವ ಅನಿವಾರ್ಯ ಪ್ರಸಂಗದಲ್ಲಿ ಮತದಾನಕ್ಕೆ ಮುಂಚಿತವಾಗಿ ಆಯೋಗ ನಿಗದಿ ಪಡಿಸಿದ ದಿನದಂದು ಮೈಕ್ರೋ ಆಬ್ಜರ್ವರ್ ಹಾಗೂ ಓರ್ವ ವಿಡಿಯೋಗ್ರಾಫರ್ದೊಂದಿಗೆ ಸಂಬಂಧಿಸಿದ ನಿಯೋಜಿತ ಅಧಿಕಾರಿಗಳು ಮತದಾರರಲ್ಲಿಗೆ ಹೋಗಿ ಬ್ಯಾಲೆಟ್ ಪತ್ರದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಆಯೋಗದ ನಿರ್ದೇಶನದಂತೆ ಈ ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯಲಿವೆ ಎಂದು ಹೇಳಿದರು.
ಈಗಾಗಲೇ ಕೇಂದ್ರ ಮೀಸಲು ಪೊಲೀಸ್ ಪಡೆಗಳು ಹಾಗೂ ಪೋಲಿಸ್ರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಕಾಸಿಗಾಗಿ ಸುದ್ದಿ, ಪ್ರಕಟಗೊಳಿಸುವ ಮುನ್ನ, ವಿಡಿಯೋ, ಆಡಿಯೋಗಳನ್ನು ಪೂರ್ವ ಪ್ರಮಾಣೀಕರಣಕ್ಕೆ ಒಳಗೊಳಪಡಿಸಬೇಕು. ಸಾಮಾಜಿಕ ಜಾಲತಾಣ ಬಳಸುವ ರಾಜಕೀಯ ಪಕ್ಷಗಳು ಪೂರ್ವ ಪ್ರಮಾಣೀಕರಣವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು. ಏಪ್ರಿಲ್ 13 ಗುರವಾರದಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 20ರ ಗುರುವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 21ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2023ರ ಮೇ.10ರ ಬುಧವಾರ ಮತದಾನ ದಿನ, ಮೇ.13ರ ಶನಿವಾರ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ,, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳಾದ ಚನ್ನಬಸಪ್ಪ ನಂದರಗಿ, ಜಮೀರ ಎ.ಇನಾಂದಾರ್, ನಿತೇಶ್ ತೊರವಿ, ಎಚ್.ಎಸ್.ದಳವಾಯಿ, ಇರ್ಫಾನ್ ಶೇಖ್, ರಾಜು ಹಿಪ್ಪರಗಿ, ಎಸ್.ಎ.ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.