ಧಾರವಾಡ: ರಾಜ್ಯದಲ್ಲಿ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇನ್ನೆರಡು ದಿನ ನೋಡಿಕೊಂಡು ನಮ್ಮ ಸರ್ಕಾರ ಬರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಸವದತ್ತಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ರೈತರು ನಷ್ಟದಲ್ಲಿದ್ದಾರೆ. ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ಕೊಡಬೇಕಾಗುತ್ತದೆ ಎಂದರು. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜನ ಅತ್ಯಂತ ಬಹುಮತ ನೀಡಿದ್ದಾರೆ. ನಾನು ಧಾರವಾಡಕ್ಕೆ ಬರಲು ಅನಾನುಕೂಲ ಆಗಿದ್ದರಿಂದ ಸವದತ್ತಿಯಲ್ಲಿ ಮತದಾರರಿಗೆ ಹಾಗೂ ಮುಖಂಡರಿಗೆ ಧನ್ಯವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಕಾರ್ಯಕರ್ತರಿಗೆ ನಾನು ಎಷ್ಟೇ ಅಭಿನಂದನೆ ಹೇಳಿದರೂ ಕಡಿಮೆಯೇ ಎಂದರು. ಹಿಂದಿನ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ನೋಡಿ ಜನ ಕಾಂಗ್ರೆಸ್ಕೆ ಅವಕಾಶ ನೀಡಿದ್ದಾರೆ. ಹೀಗಾಗಿ ನಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿಗಳನ್ನು ಈಡೇರಿಸುವ ದೃಷ್ಟಿಯಿಂದ ಸಿದ್ದರಾಮಯ್ಯನವರು ನಿನ್ನೆಯ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸ್ವಲ್ಪ ವಿಳಂಬವಾಗಬಹುದು. ಅವುಗಳನ್ನೂ ನಾವು ಈಡೇರಿಸುತ್ತೇವೆ. ನನ್ನ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನಾನು ಕ್ಷೇತ್ರಕ್ಕೆ ಬರದೇ ಇದ್ದರೂ ಅಲ್ಲೇ ಇದ್ದು ಸಭೆ ನಡೆಸುವ ಮುಖಾಂತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಬಹಳಷ್ಟಿದೆ. ಅದನ್ನು ಶೀಘ್ರ ಬಗೆಹರಿಸುತ್ತೇವೆ ಎಂದರು. ಅಲ್ಲದೇ, ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ಚಾಲ್ತಿಯಲ್ಲೇ ಇವೆ. ಈಗಲೂ ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇವನ್ನೆಲ್ಲ ನೋಡಿದಾಗ ಬಹಳ ಬೇಜಾರು ಆಗುತ್ತದೆ. ಈ ಸಂಬಂಧ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದರು.
![](https://karnataka1news.com/wp-content/uploads/2023/07/IMG-20230706-WA0059.jpg)