ಜ.15ರಂದು ಯೋಗಾಥಾನ ಕಾರ್ಯಕ್ರಮ : ಅಗತ್ಯ ಸಿದ್ಧತೆಗೆ ಎಡಿಸಿ ಕಳಸದ ಸೂಚನೆ…
ವಿಜಯಪುರ: ವಿಜಯಪುರ ನಗರದ ಸೈನಿಕಶಾಲೆ ಮೈದಾನದಲ್ಲಿ 2023ರ ಜನವರಿ 15ರಂದು ಆಯೋಜಿಸಲಾದ ಯೋಗಾಥಾನ್ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಯೋಗಾಥಾನ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು,ರಾಜ್ಯದಾದ್ಯಂತ ಜ.15 ರಂದು ಯೋಗಾಥಾನ್ ಕಾರ್ಯಕ್ರಮ ಹಮ್ಮಿಕೊಂಡು, ಯೋಗಾಪಟುಗಳ ಸಂಖ್ಯೆಗೆ ಅನುಗುಣವಾಗಿ ಯೋಗಾಥಾನ್ ಕಾರ್ಯಕ್ರಮ ಆಯೋಜಿಸುವ ಮೂಲಕ ಗಿನ್ನಿಸ್ ದಾಖಲೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸೈನಿಕ ಶಾಲೆ ಮೈದಾನದಲ್ಲಿ ಮುಖ್ಯ ವೇದಿಕೆ ಸಿದ್ಧಪಡಿಸುವುದು, ಮೈದಾನ ಸ್ವಚ್ಛತೆ, ಉಪ ವೇದಿಕೆಗಳನ್ನು ನಿರ್ಮಿಸುವುದು, ಗ್ರಿನ್ ಮ್ಯಾಟ್ ಅಳವಡಿಕೆ, ಮೈಕ್, ಬ್ಯಾರಿಕೇಡ್ï ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಸೈನ್ ಬೋರ್ಡ್ ಅಳವಡಿಕೆ ಹಾಗೂ ಜ.13 ರಂದು ಸೈನಿಕ ಶಾಲೆ ಮೈದಾನದಲ್ಲಿ ಯೋಗಾಥಾನ್ ಪೂರ್ವ ಸಿದ್ಧತಾ ಅಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗಪಟುಗಳ ಸಂಖ್ಯೆಗನುಗುಣವಾಗಿ 9 ಬ್ಲಾಕ್ಗಳನ್ನು ಸಿದ್ಧಪಡಿಸಲಾಗಿದೆ. ಅದರಂತೆ ಗ್ರೌಂಡ್ ನಂ.1ರಲ್ಲಿ 12 ಬ್ಲಾಕ್ಗಳಿದ್ದು, 1264 ಜನರಿಗೆ ಸ್ಥಳಾವಕಾಶ ಕಲ್ಪಿಸಿದೆ. ಗ್ರೌಂಡ್ ನಂ.2ರಲ್ಲಿ 85 ಬ್ಲಾಕ್ಗಳಿದ್ದು, 8760 ಜನರಿಗೆ, ಗ್ರೌಂಡ್ ನಂ.3ರಲ್ಲಿ 12 ಬ್ಲಾಕ್ಗಳಿದ್ದು, 1310 ಜನರಿಗೆ, ಗ್ರೌಂಡ್ ನಂ.4ರಲ್ಲಿ 13 ಬ್ಲಾಕ್ಗಳಿದ್ದು, 1167 ಜನರಿಗೆ ಗ್ರೌಂಡ್ ನಂ.5ರಲ್ಲಿ 16 ಬ್ಲಾಕ್ಗಳಿದ್ದು, 1689 ಜನರಿಗೆ, ಗ್ರೌಂಡ್ ನಂ.6ರಲ್ಲಿ 1 ಬ್ಲಾಕ್ವಿದ್ದು, 680 ಜನರಿಗೆ, ಗ್ರೌಂಡ್ ನಂ.7ರಲ್ಲಿ 45 ಬ್ಲಾಕ್ಗಳಿದ್ದು, 4262 ಜನರಿಗೆ, ಗ್ರೌಂಡ್ ನಂ.8ರಲ್ಲಿ 20 ಬ್ಲಾಕ್ಗಳಿದ್ದು, 1937 ಜನರಿಗೆ ಹಾಗೂ ಗ್ರೌಂಡ್ ನಂ.9ರಲ್ಲಿ 36 ಬ್ಲಾಕ್ಗಳನ್ನು ನಿರ್ಮಿಸಲಾಗಿದ್ದು, 5929 ಜನರಿಗೆ ಸ್ಥಳಾವಕಾಶವಿದ್ದು, ಯಾವ ಬ್ಲಾಕ್ಗಳಲ್ಲಿ ಯಾವ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿದ್ದಾರೆ ಎಂಬುದರ ಕುರಿತು ಸೈನ್ ಬೋರ್ಡಗಳನ್ನು ಅಳವಡಿಸಬೇಕು. ಈ ಕುರಿತು ಪೂರ್ವಭಾವಿಯಾಗಿ ನೀಲನಕ್ಷೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗಪಟುಗಳಿಗೆ ಫುಡ್ ಕೌಂಟರ್ ಅಳವಡಿÀಸಿ, ಸ್ವಯಂ ಸೇವಕರ ಸೇವೆಯನ್ನು ಪಡೆದು, ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವವರಿಗೆ ಹಾಗೂ ಕಾರ್ಯಕ್ರಮದಿಂದ ತಮ್ಮ ಸ್ಥಳಗಳಿಗೆ ತೆರಳಲು ಕೆಕೆ ಆರ್ ಟಿಸಿ ಬಸ್ಗಳ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಯೋಗಾಥಾನ್ ಕಾರ್ಯಕ್ರಮಕ್ಕಾಗಿ ರಚಿಸಲಾದ ಎಲ್ಲ ಸಮಿತಿಗಳು ಸಮನ್ವಯತೆ ಸಾಧಿಸಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪ ಆಯುಕ್ತ ಮಹಾವೀರ ಬೋರಣ್ಣವರ, ಡಿವೈಎಸ್ಪಿ ಸಿದ್ದೇಶ್ವರ, ಆಹಾರ ಇಲಾಖೆ ಉಪನಿರ್ದೇಶಕ ಸಿದರಾಮ ಮಾರಿಹಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್.ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ.ಲೋಣಿ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.