ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆ-2023ರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ 2072 ಮತಗಟ್ಟೆಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ವಿವಿಧ ಯೋಜನೆ ನೀಲನಕ್ಷೆ ಸಿದ್ದಪಡಿಸಿಕೊಂಡು ಕಾರ್ಯನಿರ್ವಹಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ ಅವರು ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಸ್ವೀಪ್ ಚಟುವಟಿಕೆ ಹಾಗೂ ಕ್ರಿಯಾ ಯೋಜನೆ ಸಿದ್ದಪಡಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಎಲ್ಲ ಇಲಾಖಾಧಿಕಾರಿಗಳು ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಿದ್ದೀರಿ, ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ (ವೋಟರ್ ಟರ್ನೌಟ್) ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು. ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಯಲ್ಲಿ ಆದ್ಯತೆ ಮೇಲೆ ಸಮಸ್ಯೆಗಳಿದ್ದಲ್ಲಿ ಗುರುತಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿ, ಹೆಸರು ಪರಿಶೀಲನೆ, ಮತಗಟ್ಟೆಯಲ್ಲಿ ಮತದಾನದಲ್ಲಿ ಕಂಡು ಬರುವ ಸರತಿ ಸಾಲು ಇವುಗಳ ಕುರಿತು ಖಚಿತಪಡಿಸಿಕೊಂಡು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವ 8 ವಿಧಾನಸಭಾ ಮತಕ್ಷೇತ್ರಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮತಗಟ್ಟೆಗಳನ್ನು ಗುರುತಿಸಿದ್ದು, ಇದರ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ, ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಅಲ್ಲಿನ ಸಮಸ್ಯೆ ಅರಿಯುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಳಕ್ಕೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ತಾಲೂಕು-ನಗರ ಅಧಿಕಾರಿಗಳು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮತದಾನ ಸಂದರ್ಭದಲ್ಲಿ ಮತಗಟ್ಟೆಗೆ ಆಗಮಿಸುವ ಮತದಾರರಿಗೆ ಮೂಲಭೂತ ಸೌಕರ್ಯ, ಆಸ್ಪದವಿದ್ದೆಡೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸ ಮತದಾರರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು. ಬೀಟ್ ಕಾನ್ಸಟೇಬಲ್, ಪೌರಕಾರ್ಮಿಕ, ಮೀಟರ್ ರೀಡರ್, ಶಾಲಾ ಶಿಕ್ಷಕರು, ಕೆಎಂಎಫ್, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಅಸೋಸಿಯೇಶನ್ ಹಾಗೂ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವೀಪ್ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯ ಮಹಿಳಾ ಅಧಿಕಾರಿಗಳ ಸಮೀಕ್ಷೆ ನಡೆಸಿ, ಮತದಾನ ಕೇಂದ್ರದಲ್ಲಿ ಮಹಿಳಾ ಅಧಿಕಾರಿಗಳಿರುವ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು. ವಿಕಲಚೇತನ ಮತದಾರರನ್ನು ಜಾಗೃತಗೊಳಿಸಲು ವ್ಯಾಟ್ಸಪ್, ವಿಡಿಯೋ ಕರೆ, ಸಂಜ್ಞಾ ಭಾಷಾ ಶಿಕ್ಷಕರ ಬಳಕೆ ಮಾಡಿ ಜಾಗೃತಿ ಮೂಡಿಸಬೇಕು. ಮತದಾನ ಕೇಂದ್ರಗಳಲ್ಲಿ ವಿಕಲಚೇತನರಿಗಾಗಿ ಅವಶ್ಯ ಸಾಧನ-ಸಲಕರಣೆಗಳನ್ನು ಬಳಸಿಕೊಂಡು ವಿಕಲಚೇತನರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು. ಚುನಾವಣೆ ಐಕಾನ್ ಆಗಿ ವಿಕಲಚೇತನ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ನೇಮಕ ಮಾಡಿದೆ. ವಿಕಲಚೇತನರ ಮತದಾನಕ್ಕೆ ಜಾಗೃತಿ ಮೂಡಿಸಲು ಬೀದಿ ನಾಟಕ ತಂಡ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಮತದಾನ ಕೇಂದ್ರದಲ್ಲಿ ಸ್ಥಳೀಯ ಐತಿಹಾಸಿಕ, ಪಾರಂಪರಿಕ ಪ್ರಸಿದ್ದಿ ಪಡೆದ ಮಾಹಿತಿ ಅಳವಡಿಸಬೇಕು. ಮತದಾನ ದಿನ ಮತ ಚಲಾಯಿಸಲು ರಜೆ ಹೋಗದೆ ಮತದಾನ ಮಾಡುವಂತೆ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಆಡಿಯೋ ‘ನಮ್ಮ ಮತದಾನ ನಮ್ಮ ಹಕ್ಕು’ ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ವಿಡಿಯೋ ಪ್ರದರ್ಶಿಸಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಮತದಾನದ ಮಹತ್ವ ಸಾರುವ ‘ಪ್ರಜಾಪ್ರಭುತ್ವ ನಮ್ಮಿಂದ- ಮತ ಚಲಾಯಿಸೊಣ ಹೆಮ್ಮೆಯಿಂದ’, ‘ನಾನು ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ ನನ್ನಲ್ಲಿಡಗಿದೆ ಶಕ್ತಿ’ ಕೇಂದ್ರ ಚುನಾವಣಾ ಆಯೋಗದ ವಿಡಿಯೋ ಹಾಗೂ ‘ನಮ್ಮ ರಾಜ್ಯದ ಭವಿಷ್ಯ ನಮ್ಮ ಬೆರಳಲ್ಲಿ’ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಂಡಿತವಾಗಿ ಮತದಾನ ಮಾಡುವೆ’ ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮತದಾರರು ಸಹ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿರುವುದು, ಮತಗಟ್ಟೆ ಸೇರಿದಂತೆ ಮಾಹಿತಿಯನ್ನು ವಿಎಚ್ಪಿ ಆಪ್ನಲಿ ಪಡೆಯಬಹುದಾಗಿದ್ದು, ಮತದಾರರು ತಾವಿರುವಲ್ಲಿಯೇ ಈ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ ಎಂಬುದರ ಕುರಿತು ಮತದಾರರಲ್ಲಿ ಅರಿವು-ಜಾಗೃತಿ ಮೂಡಿಸಬೇಕು. ಸ್ವೀಪ್ ಸಮಿತಿ ಅಧಿಕಾರಿಗಳು, ತಾಲೂಕಾ ತಹಶೀಲ್ದಾರರು, ಬಿಇಓ, ಡಯಟ್ ಪ್ರಾಚಾರ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಸಕ್ರೀಯವಾಗಿ ಕಾರ್ಯನಿರ್ವಹಿಸುವ ಮೂಲಕ ಪರಿಣಾಮಕಾರಿಯಾಗಿ ಮತದಾನ ಜಾಗೃತಿಗೆ ಶ್ರಮಿಸುವಂತೆ ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗುವುದನ್ನು ಪರಿಗಣಿಸಿ, ಮತದಾರರ ಅನುಕೂಲಕ್ಕಾಗಿ ಸಾಧ್ಯವಿರುವ ಕಡೆ, ನೆರಳಿನ ವ್ಯವಸ್ಥೆ, ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಕ್ಯಾಳ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಆರಂಭಕ್ಕೆ ಮೊದಲು ವಿಕಲಚೇತನ ಫಲಾನುಭವಿಗಳಾದ ಅಬ್ದುಲ್ರಜಾಕ ಹುಸೇನಬಾಷಾ ಅವರಿಗೆ ಊರುಗೋಲು, ಸೋಮಶೇಖರ ಮೆಂಡೆಗಾರ ಅವರಿಗೆ ಸ್ಟಿಕ್, ನಿಂಗನಗೌಡ ಪಾಟೀಲ ಅವರಿಗೆ ಬಗಲಬಡಿಗೆ, ಅಬೂಬಕರ ಜಮಾದಾರ ಅವರಿಗೆ ವಾಕರ್ ಹಾಗೂ ಮಹ್ಮದ ಮದಭಾವಿ ಅವರಿಗೆ ವ್ಹೀಲ್ಚೇರ ವಿತರಿಸಲಾಯಿತು.
ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ : ಇದಕ್ಕೂ ಮೊದಲು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ ಅವರು ಚಾಲನೆ ನೀಡಿದರು. ಈ ಸಂದರ್ಭಧಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ ವಣಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕ್ರೀಡಾಧಿಕಾರಿ ಎಸ್.ಜಿ.ಲೋಣಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜಶೇಖರ ದೈವಾಡಿ, ಎನ್.ಎಸ್.ಎಸ್. ನೋಡಲ್ ಅಧಿಕಾರಿ ಡಾ.ಪ್ರಕಾಶ ರಾಠೋಡ, ಎಎಸ್ಪಿ ಕಾಲೇಜ್ ಮತ್ತು ಅಂಜುಮನ್ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರದೀಪ ಕುಂಬಾರ ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.