ವಿಜಯಪುರ : ಅಫೀಮು ಗಿಡದ ಪೌಡರ್ ಅಕ್ರಮ ಸಾಗಣೆ ಮಾಡಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹರಿಯಾಣಾ ಮೂಲದ ಗಣೇಶ ದಮರ್ ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಲಾರಿಯಲ್ಲಿ ಅಫೀಮು ಗಿಡದ ಕಡ್ಡಿಯ ಪುಡಿ ಹಾಗೂ ಪೌಡರ್ ಅನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ಇಂಡಿ ತಾಲೂಕಿನ ಧೂಳಖೇಡ ಬಳಿ ವಾಹನ ನಿಲ್ಲಿಸಿ ತಪಾಸಣೆ ನಡೆಸಿದಾಗ, ಲಾರಿಯಲ್ಲಿದ್ದ 29 ಕೆಜಿ ಪೌಡರ್ ವಶಪಡಿಸಿಕೊಂಡು, ಆರೋಪಿ ವಿರುದ್ಧ ನ್ಯಾರೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಫಿಕ್ ಸಬ್ಸಟನ್ಸ್ಸ್ ಆ್ಯಕ್ಟ್ನಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಶಿವಾಜಿ ನಾಲವಾಡೆ ಅವರು, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆ ಅವಲೋಕಿಸಿ, ಹರಿಯಾಣಾ ಮೂಲದ ಆರೋಪಿ ಗಣೇಶ ದಮರ್ಗೆ ಎಸ್ಡಿಪಿಎಸ್ ಕಾಯ್ದೆಯಡಿ 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಧಾನ ಸರಕಾರಿ ಅಭಿಯೋಜಕ ಎಸ್.ಎಚ್. ಹಕೀಂ ವಾದ ಮಂಡಿಸಿದ್ದರು.