ವಿಜಯಪುರ: ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂ. ದಂಡ ವಿಧಿಸಿ ವಿಜಯಪುರ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಇಂಡಿ ತಾಲೂಕಿನ ತಡವಲಗಾ ಗ್ರಾಮದ ಅರ್ಜುನ ಹಣಮಂತ ಕ್ಷತ್ರಿ (23) ಶಿಕ್ಷೆಗೊಳಗಾದವ. ಇಂಡಿ ಪಟ್ಟಣದಲ್ಲಿದ್ದ ಶಾಲಾ ಪಂದ್ಯಾಟ ಮುಗಿಸಿಕೊಂಡು ತನ್ನ ವಸತಿ ಕಡೆಗೆ ನಡೆದುಕೊಂಡು ಹೊರಟಿದ್ದಳು. ಆಗ ಆರೋಪಿ ಆಕೆಯನ್ನು ಅಡ್ಡಗಟ್ಟಿ ನಿಂಬೆ ಪಡಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದ. ಬಳಿಕ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ, ನಿಮ್ಮ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಹೊರ್ತಿ ಠಾಣೆ ಪೊಲೀಸರು, ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಾಮ ನಾಯಕ ಅವರು, ಪ್ರಕರಣದಲ್ಲಿಯ ಸಾಕ್ಷ್ಯಾಧಾರಗಳು ರುಜುವಾತಾಗಿವೆ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ. ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವಿ.ಜಿ. ಹಗರಗುಂಡ ಸರಕಾರದ ಪರವಾಗಿ ವಾದ ಮಂಡಿಸಿದ್ದರು.