ವಿಜಯಪುರ: ದೇಶಾದ್ಯಂತ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ದೃಶ್ಯಾವಳಿಗಳು ಕಣ್ಮನಗಳಲ್ಲಿ ರಾರಾಜಿಸುತ್ತಿರುವಾಗಲೇ ಮಾಡಬಾರದ್ದನ್ನು ಮಾಡಿ ಜೈಲು ಪಾಲಾಗಿರುವ ಕೈದಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾ ಮಧ್ಯೆ ರಾಮನನ್ನು ಎಳೆತಂದು ಕೋಲಾಹಲ ಎಬ್ಬಿಸಿದ್ದಾರೆ. ವಿಜಯಪುರದ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಹೊರಬಂದ ಮಹಾರಾಷ್ಟ್ರದ ಕೈದಿಯೊಬ್ಬನ ವಿಡಿಯೋ ದೃಶ್ಯಾವಳಿಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಕರೆತಂದ ಕೈದಿಗಳನ್ನು ದರ್ಗಾ ಜೈಲ್ನಲ್ಲಿರಿಸಲಾಗಿದೆ. ಇದೇ ಜೈಲ್ನಲ್ಲಿ ರೌಡಿ ಶೀಟರ್ ಶೇಖ್ ಮೊಹಮ್ಮದ್ ಮೋದಿ ಮತ್ತಿತರೂ ಇದ್ದಾರೆ. ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ಮೋದಿ ಮತ್ತು ಕೆಲವು ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂಬುದು ವಿಡಿಯೋ ಮಾಡಿರುವ ಕೈದಿಯ ಅಳಲು. ಅಷ್ಟಕ್ಕೂ ತಮ್ಮ ಮೇಲಿನ ಹಲ್ಲೆಗೆ ರಾಮನ ಪೂಜೆಯೇ ಕಾರಣ, ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಜೈಲಿನಲ್ಲಿ ನಮ್ಮ ಧರ್ಮಕ್ಕೆ ಅನುಸಾರವಾಗಿ ಪೂಜೆ ಮಾಡುತ್ತಿದ್ದಾಗಿ ಮೋದಿ ಹಾಗೂ ಅವನ ಸಹಚರರು ಸೇರಿ ಹಲ್ಲೆ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯ ನಾಥ ಅವರು ತಮಗೆ ರಕ್ಷಣೆ ಕೊಡಬೇಕೆಂದು ಆ ಕೈದಿ ಬೇಡಿಕೊಂಡಿದ್ದಾನೆ. ಅದರ ವಿಡಿಯೋ ದೃಶ್ಯಾವಳಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಅಷ್ಟಕ್ಕೂ ಜೈಲಿನಲ್ಲಿ ಈ ಕೈದಿಗೆ ವಿಡಿಯೋ ಮಾಡಲು ಅವಕಾಶ ಕಲ್ಪಿಸಿದ್ದು ಯಾರು? ಮೊಬೈಲ್ ಒಳಗಡೆ ತೆಗೆದುಕೊಂಡು ಹೋಗಿದ್ದೇಗೆ? ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದು ಯಾರು? ಎಂಬ ಚರ್ಚೆಗೆ ಜೈಲು ಅಧಿಕಾರಿಯೇ ಉತ್ತರಿಸಬೇಕಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)