ವಿಜಯಪುರ: ಇತ್ತೀಚೆಗೆ ಸುರಿದ ಬಾರೀ ಮಳೆಯಿಂದಾಗಿ ಡೋಣಿ ನದಿಯು ತುಂಬಿ ಹರಿದು ಅವಾಂತರ ಸೃಷ್ಟಿಸಿದೆ. ಈ ನದಿಪಾತ್ರವುದ್ದಕ್ಕೂ ಉಂಟಾದ ಅಪಾರ ಹಾನಿ ಪರಿಶೀಲನೆಯ ಕಾರ್ಯಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ಎರಡನೆ ದಿನವಾದ ಆಗಸ್ಟ್ 10ರಂದು ಮುಂದುವರೆಸಿದರು.
ದೇವರಹಿಪ್ಪರಗಿ, ತಾಳಿಕೋಟಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಸಂಚರಿಸಿ ಬೆಳೆ ಹಾನಿ-ಮನೆ ಹಾನಿಯನ್ನು ಖುದ್ದು ವೀಕ್ಷಣೆ ಮಾಡಿದರು.
ಶಾಸಕರಾದ ಸೋಮನಗೌಡ ಬಿ. ಪಾಟೀಲ ಸಾಸನೂರ ಅವರೊಂದಿಗೆ ಮೊದಲಿಗೆ ಸಚಿವರು, ದೇವರಹಿಪ್ಪರಗಿ ತಾಲೂಕಿನಲ್ಲಿ ಸಂಚರಿಸಿದರು.
ದೇವರಹಿಪ್ಪರಗಿ-ಮುದ್ದೇಬಿಹಾಳ
ಮದ್ಯೆದಲ್ಲಿ ಬರುವ ಸಾತಿಹಾಳ ಸೇತುವೆಯು ಡೋಣಿ ನದಿ ನೀರಿನಿಂದಾಗಿ ಕೆಲ ಕಡೆ ಕಿತ್ತು ಹೋಗಿರುವುದನ್ನು ಮತ್ತು ನದಿ ಪಾತ್ರದ ಅಕ್ಕಪಕ್ಕದ ಜಮೀನು ನೀರಿನಿಂದಾಗಿ ಹಾನಿಯಾಗಿರುವುದನ್ನು ನೋಡಿದರು.
*ಶಾಶ್ವತ ಪರಿಹಾರ ಕಲ್ಪಿಸಿ:* ನಮಗೆ ತಾತ್ಕಾಲಿಕ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು. ಡೋಣಿ ನದಿ ಹೂಳು ಎತ್ತಿಸಬೇಕು. ಸಾತಿಹಾಳ ಸೇತುವೆಯನ್ನು ಎತ್ತರಿಸಬೇಕು. ಮಳೆಯಿಂದಾದ ಹಾನಿಗೆ ಪರಿಹಾರ ಕಲ್ಪಿಸಬೇಕು. ಮಳೆಯಾದಾಗೊಮ್ಮೆ ಶಾಲಾ ಆವರಣದಲ್ಲಿ ಮೊಳಕಾಲವರೆಗೆ ನೀರು ನಿಂತು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಊರು ಪಕ್ಕದ ಜಮೀನಿನ ನೀರು ಮನೆಗಳಿಗೆ ನುಗ್ಗಿ ನೀರು ಬಳಿಯುವಂತಾಗಿದೆ ಎಂದು ಅದೆ ಗ್ರಾಮದ ಹರಿಜನ ಕೇರಿಯ ನಿವಾಸಿಗಳು ಸಚಿವರಲ್ಲಿ ಮನವಿ ಮಾಡಿದರು.
*ತಾಳಿಕೋಟಿ ತಾಲೂಕಿನಲ್ಲಿ ಸಂಚಾರ:* ದೇವರಹಿಪ್ಪರಗಿ ಭೇಟಿ ತರುವಾಯ ಸಚಿವರು ತಾಳಿಕೋಟೆ ತಾಲೂಕಿನಲ್ಲಿ ಸಂಚರಿಸಿದರು. ಆಗಸ್ಟ್ 3ರಂದು ಸಿಡಿಲು ಬಡಿದು ಮೃತಪಟ್ಟ ತಾಳಿಕೋಟೆ ತಾಲೂಕಿನ ಹುಣಸ್ಯಾಳ ಗ್ರಾಮದ ಜೈನಾಬಿ ನಜೀರ್ ಅಹ್ಮದ್ ಸಿಪಾಯಿ ಅವರ ಕುಟುಂಬದವರಿಗೆ 5 ಲಕ್ಷ ರೂ.ಪರಿಹಾರ ಮಂಜೂರಾತಿ ಆದೇಶದ ಪ್ರತಿಯನ್ನು ತಾಳಿಕೋಟೆಯ ಪ್ರವಾಸಿ ಮಂದಿರದಲ್ಲಿ ವಿತರಿಸಿದರು. ಘಟನೆಯಲ್ಲಿ ಎಮ್ಮೆ ಮೃತಪಟ್ಟಿದ್ದು ಇದಕ್ಕಾಗಿ 30 ಸಾವಿರ ರೂ.ಗಳನ್ನು ಸಹ ವಿತರಿಸಲಾಯಿತು.
*ಮುಳುಗಡೆ ಗ್ರಾಮಕ್ಕೆ ಭೇಟಿ:* ಡೋಣಿ ನದಿನೀರಿನಿಂದ ಮುಳುಗಡೆಯಾಗುವ ತಾಳಿಕೋಟೆ ತಾಲೂಕಿನ ಬೋಳುವಾಡ ಗ್ರಾಮಕ್ಕೆ ತೆರಳಿದ ಸಚಿವರು, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲಿನ ಸರ್ಕಾರಿ ಶಾಲೆಯ ದುಸ್ತಿತಿಯ ಬಗ್ಗೆ ಮುಖ್ಯಾಧ್ಯಾಪಕರಾದ
ಎಸ್ ಎಂ ಕುಪ್ಪಸ್ತ, ಶಿಕ್ಷಕಿ ಎಸ್ ಬಿ ಪಾಟೀಲ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್.ಡಿ.ಆನಂದಕುಮಾರ,
ಸಹಾಯಕ ಆಯುಕ್ತರಾದ
ರಾಮಚಂದ್ರ ಗಡಾದೆ, ತಾಳಿಕೋಟೆ ತಹಸೀಲ್ದಾರ, ತಾಪಂ ಇಓ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಬಿ.ಚಿಕ್ಕಲಗಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಬರಗಿಮಠ, ವಿಪತ್ತು ನಿರ್ಹಣೆಯ ದೇವರಹಿಪ್ಪರಗಿ ತಾಲೂಕು ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಇತರರು ಇದ್ದರು.