ವಿಜಯಪುರ: ಮಕ್ಕಳೆದುರೇ ತಾಯಿ ಮೇಲೆ ಪೆಟ್ರೋಲ್ ಉಗ್ಗಿ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಅಕ್ಬರ್ಭಾಷಾ ಗಾಲೀಬಸಾಬ ಬಾಗವಾನ ಗಲ್ಲು ಶಿಕ್ಷೆಗೊಳಗಾದವ. ಈತ ಗ್ರಾಮದ ಶಮಶಾದ್ ಎಂಬ ಮಹಿಳೆಯನ್ನು ಇಷ್ಟಪಡುತ್ತಿದ್ದ. ರಾತ್ರಿ ವೇಳೆ ಶಮಶಾದ್ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆರೋಪಿ ನಿಂತು ನೋಡುತ್ತಿದ್ದ. ಇದರಿಂದಾಗಿ ಸಿಟ್ಟಾದ ಶಮಶಾದ್ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಳು.
![](https://karnataka1news.com/wp-content/uploads/2023/05/IMG_20221212_183635-1024x532.jpg)
ಆಗ ಕೋಪೋದ್ರಿಕ್ತನಾದ ಆರೋಪಿ ಅಕ್ಬರ್ ನನ್ನ 4 ಎಕರೆ ಜಮೀನು ಹೋಗಲಿ ನಿನ್ನನ್ನು ಬಿಡಲ್ಲ. ಇಲ್ಲವಾದಲ್ಲಿ ನಿನ್ನನ್ನು ಸುಟ್ಟು ಖಲಾಸ್ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದ. ಕೊನೆಗೆ 2018ರ ಜನವರಿ 27 ರಂದು ಮಹಿಳೆ ತನ್ನ ಮನೆಯ ಮುಂದೆ ಮಕ್ಕಳೊಂದಿಗೆ ಕುಳಿತಿದ್ದಾಗ ಮಹಿಳೆ ಮೇಲೆ ಏಕಾಏಕಿ ಪೆಟ್ರೋಲ್ ತುಂಬಿದ 2 ಪ್ಲಾಸ್ಟಿಕ್ ಬಾಟಲಿ ಹಾಗೂ ಕಡ್ಡಿ ಡಬ್ಬಿಯೊಂದಿಗೆ ದಾಳಿ ಮಾಡಿ, ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಮಹಿಳೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೇ ಮಹಿಳೆ 2018ರ ಫೆ. 15 ರಂದು ಅಸುನೀಗಿದ್ದನ್ನು ಸಿಂದಗಿ ಸಿಪಿಐ ಎಂ.ಕೆ. ಧಾಮಣ್ಣವರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ. ಅವರು, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆಗಳನ್ನು ಪರಿಶೀಲಿಸಿ, ಆರೋಪಿ ಅಕ್ಬರ್ಭಾಷಾ ಮೇಲಿನ ಆಪಾದನೆ ರುಜುವಾತಾಗಿದೆ ಎಂದು ತೀರ್ಮಾನಿಸಿ, ಅವನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜೊತೆಗೆ ಮೃತಳ ಕುಟುಂಬದವರಿಗೆ 5 ಲಕ್ಷ ರೂ. ಗಳನ್ನು ಆರೋಪಿ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ 1ನೇ ಅಧಿಕ ಸರಕಾರಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.