ವಿಜಯಪುರ: ಚಾಕುವಿನಿಂದ ಕೊಲೆ ಮಾಡಿದ ಆರೋಪಿಗೆ ವಿಜಯಪುರ ಜಿಲ್ಲಾ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಖತಿಜಾಪುರ ಗ್ರಾಮದ ಖಾಜಲ್ ಅಮೀನ್ಸಾಬ ಮನಗೂಳಿ ಶಿಕ್ಷೆಗೊಳಗಾದವ. ಖತಿಜಾಪುರ ಗ್ರಾಮದ ಹಸೀನಾ ಮಸ್ತಾನ್ಸಾಬ ಮುಲ್ಲಾ ಎಂಬ ಮಹಿಳೆ, ಆರೋಪಿಯನ್ನು ನೋಡಿ ನಕ್ಕಿದ್ದಾಳೆಂದು ಊಹಿಸಿ, ಮಹಿಳೆ ಭೇಟಿಯಾದಾಗಲೆಲ್ಲ ಮಾತನಾಡಿಸುತ್ತಿದ್ದ. ಆದರೆ, ಇದಕ್ಕೆ ಮಹಿಳೆ ಪ್ರತ್ಯುತ್ತರ ನೀಡಿದ್ದಳು. ನಾನು ನಿನ್ನ ನೋಡಿ ನಕ್ಕಿಲ್ಲ. ನನ್ನೊಂದಿಗೆ ಯಾಕೆ ಮಾತನಾಡುವೆ ಎಂದು ಪ್ರಶ್ನಿಸಿದ್ದಳು. ಈ ವಿಷಯವನ್ನು ಮಹಿಳೆ ತನ್ನ ದೊಡ್ಡ ಮಗ ಇಸ್ಮಾಯಿಲ್ಗೆ ತಿಳಿಸಿದ್ದಳು. ಆಗ ಇಸ್ಮಾಯಿಲ್ 2020ರ ಡಿಸೆಂಬರ್. 26 ರಂದು ಮಧ್ಯೆ ಪ್ರವೇಶಿಸಿ, ಆರೋಪಿಯನ್ನು ಪ್ರಶ್ನಿಸಿದ. ಇದರಿಂದ ಕುಪಿತಗೊಂಡ ಆರೋಪಿ ಇಸ್ಮಾಯಿಲ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ವಿಜಯಪುರ ಗ್ರಾಮಾಂತರ ಠಾಣೆ ಸಿಪಿಐ ಎಸ್.ಬಿ. ಪಾಲಭಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಸುಭಾಸ ಸಂಕದ, ಪುರಾವೆ ಪರಿಶೀಲಿಸಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ 3ನೇ ಅಧಿಕ ಸರಕಾರಿ ಅಭಿಯೋಜಕ ಬಿ.ಡಿ. ಬಾಗವಾನ ವಾದ ಮಂಡಿಸಿದ್ದರು.