ವಿಜಯಪುರ : ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಇಬ್ಬರಿಗೆ ಗಲ್ಲು ಶಿಕ್ಷೆ, ಬಾಕಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 4.19 ಲಕ್ಷ ರೂ. ದಂಡ ವಿಧಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಇಬ್ರಾಹಿಂಸಾಬ ಮಹಮ್ಮದಸಾಬ ಅತ್ತಾರ ಹಾಗೂ ಅಕ್ಬರ್ ಮಹಮ್ಮದಸಾಬ ಅತ್ತಾರ ಗಲ್ಲು ಶಿಕ್ಷೆಗೊಳಗಾದರೆ, ಹತ್ಯೆಗೀಡಾದ ಮಹಿಳೆಯ ತಾಯಿ ರಮಜಾನಬಿ ಅತ್ತಾರ, ಸಂಬಂಧಿಗಳಾದ ದಾವಲಬಿ/ಸಲ್ಮಾ ಬಂದೇನವಾಜ್ ಜಮಾದಾರ, ಅಜಮಾ ಜಿಲಾನಿ ದಖನಿ, ಜಿಲಾನಿ ಅಬ್ದುಲ್ಖಾದರ್ ದಖನಿ, ದಾವಲಬಿ ಸುಭಾನ್ ಧನ್ನೂರ ಜೀವಾವಧಿ ಶಿಕ್ಷೆಗೊಳಗಾದವರು. ಆರೋಪಿ ನಂ. 4 ರಮಜಾನಬಿ ಪುತ್ರಿ ಬಾನು/ಬಾನುಬೇಗಂ ಅತ್ತಾರ ಅದೇ ಗ್ರಾಮದ ಸಾಯಬಣ್ಣ/ಮುದಕಪ್ಪ ಕೊಣ್ಣೂರ ಎಂಬಾತನನ್ನು ಪ್ರೀತಿಸಿ, 2017ರಲ್ಲಿ ಮದುವೆಯಾಗಿದ್ದಳು. ಯುವತಿ ಗರ್ಭಿಣಿಯಾಗಿದ್ದನ್ನರಿತ ಕುಟುಂಬ ಸದಸ್ಯರು, ಯುವತಿ ಹಾಗೂ ಯುವಕನನ್ನು ಕೊಲೆ ಮಾಡಲು ಸಂಚು ರೂಪಿಸಿದರು. ಕೈಗೆ ಸಿಕ್ಕ ಯುವತಿಯನ್ನು ಹೊಡೆಯುತ್ತಿದ್ದಾಗ ಆಕೆ ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಳು. ಆಗ ಆರೋಪಿತರು ಈಕೆ ಬೇರೆಯವರ ವಂಶ ಉದ್ದಾರ ಮಾಡಲಿಕ್ಕೆ ನಮ್ಮ ಮನೆತನದ ಮರ್ಯಾದೆ ಮಣ್ಣು ಪಾಲು ಮಾಡಿದ್ದಾಳೆ. ಹೀಗಾಗಿ ಈಕೆಯನ್ನು ಸುಟ್ಟು ಬಿಡೋಣ ಎಂದು ನಿರ್ಧರಿಸಿ, ಆಕೆಯ ಮೈಮೇಲೆ ಸೀಮೆಎಣ್ಣೆ ಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಏತನ್ಮಧ್ಯೆ ಯುವಕ ಆರೋಪಿಗಳಿಂದ ರಕ್ಷಣೆಯಾಗಿದ್ದ ಎಂದು ತಾಳಿಕೋಟೆ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸತೀಶ ಎಲ್.ಪಿ. ಅವರು, ಆರೋಪಿಗಳ ಮೇಲಿನ ಆಪಾದನೆಗಳು ರುಜುವಾತಾಗಿವೆ ಎಂದು ತೀರ್ಮಾನಿಸಿ, 1 ಮತ್ತು 2ನೇ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಹಾಗೂ ಬಾಕಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಎಸ್.ಎಸ್. ಲೋಕೂರ ವಾದ ಮಂಡಿಸಿದ್ದರು.