ವಿಜಯಪುರ: ಇತ್ತೀಚಿಗೆ ಅಕಾಲಿಕವಾಗಿ ನಿಧನರಾದ ದಿ.ಶಿವಾನಂದ ಪಾಟೀಲ ಸೋಮಜಾಳ ಅವರ ಧರ್ಮಪತ್ನಿ ವಿಶಾಲಾಕ್ಷಿ ಪಾಟೀಲ ಅವರಿಗೆ ಜೆಡಿಎಸ್ ಪಕ್ಷದ ಟಿಕೆಟ್ ಘೋಷಣೆಯಾಗಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಿದರು. ಇಂದು ಸಿಂದಗಿಯಲ್ಲಿ ನಡೆದ ದಿ. ಶಿವಾನಂದ ಪಾಟೀಲರ ಶ್ರದ್ಧಾಂಜಲಿ ಸಭೆಯಲ್ಲಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಸೋಮಜಾಳ ಅವರಿಗೆ ಟಿಕೆಟ್ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಿ. ಶಿವಾನಂದ ಪಾಟೀಲರ ಧರ್ಮಪತ್ನಿಯವರಿಗೆ ಆರ್ಶಿವಾದ ಮಾಡಬೇಕೆಂದು ಕೋರಿದರು. ಟಿಕೆಟ್ ನೀಡುವ ವಿಚಾರವಾಗಿ ನಾನು ಯಾವುದೇ ನಮ್ಮ ಮುಖಂಡರೊಂದಿಗೆ ಚರ್ಚಿಸಿಲ್ಲಾ. ಈ ವೇದಿಕೆಗೆ ಬಂದಾಗ ಆ ಭಗವಂತನ ಪ್ರೇರೆಪಣೆಯಿಂದ, ಸಮಾಜಕ್ಕೆ ಶಿವಾನಂದ ಪಾಟೀಲರು ಸಲ್ಲಿಸಿರುವ ಸೇವೆಗೆ ಗೌರವ ಸಲ್ಲಿಸಲು ವಿಶಾಲಾಕ್ಷಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.