ವಿಜಯಪುರ: ರಾಜ್ಯದಲ್ಲಿ 5 ವಲಯ ಕಚೇರಿಗಳನ್ನು ಸ್ಥಾಪಿಸಿ ವಕ್ಫ್ ಆಸ್ತಿ ರಕ್ಷಣೆ, ಸುಧಾರಣೆಗೆ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆಯೋಗದ ಅಧ್ಯಕ್ಷನಾದ ಮೇಲೆ ವಕ್ಫ್ ಆಸ್ತಿ ರಕ್ಷಣೆ, ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ವಕ್ಫ್ ಕುರಿತು ಹಲವು ಕೊರತೆಗಳಿವೆ. ಈ ಸಮಸ್ಯೆಗಳ ನಿವಾರಣೆಗೆ ಕೇವಲ ಬೆಂಗಳೂರಿನಲ್ಲಿ ಒಂದು ಕಚೇರಿ ಇರುವುದರಿಂದ ಅನಾನೂಕೂಲವಾಗುತ್ತಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ, ಕರವಾಳಿ ಕರ್ನಾಟಕ ( ಮಂಗಳೂರು), ಹಳೆ ಮೈಸೂರ ಮತ್ತು ಗ್ರಾಮೀಣ ಬೆಂಗಳೂರಿನಲ್ಲಿ ವಲಯ ಕಚೇರಿಗಳನ್ನು ಸ್ಥಾಪಿಸಿ, ಐಎಎಸ್ ಅಧಿಕಾರಿಗಳನ್ನು ಈ ಕಚೇರಿಗೆ ನೇಮಿಸಿ, ವಕ್ಫ್ ಆಸ್ತಿ ರಕ್ಷಣೆ ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಅನುಕೂಲವಾಗುವುದರಿಂದ ಕಚೇರಿಗಳ ಸ್ಥಾಪನೆಗೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ವಕ್ಫ್ ಆಸ್ತಿ ರಕ್ಷಣೆಯ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಕ್ಫ್ ಆಸ್ತಿ ಅತಿಕ್ರಮಣವಾಗದಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಓರ್ವ ಇನ್ಸಪೆಕ್ಟರ್, ಓರ್ವ ಸಬ್ ಇನ್ಸಪೆಕ್ಟರ್, 4ಜನ ಪೋಲಿಸ್ರನ್ನೊಳಗೊಂಡ ಟಾಸ್ಕ್ಪೋರ್ಸ್ ಸಮಿತಿ ವಕ್ಫ್ ಆಸ್ತಿ ರಕ್ಷಣೆಗೆ ಕಾರ್ಯನಿರ್ವಹಿಸಲಿದ್ದು, ರೇಲ್ವೆ ಪ್ರೊಟೆಕ್ಷನ್ ಪೋರ್ಸ್ ಮಾದರಿಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲು ಟಾಸ್ಕ್ ಪೊರ್ಸ್ ಸಮಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶ ಕಾರ್ಯಕ್ರಮ ಅನುಷ್ಠಾನ ಕುರಿತು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ವಸತಿ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ದೊರೆಯುವಂತಾಗಬೇಕು. ಬ್ಯಾಕ್ಗಳಿಂದ ಸಾಲ-ಸೌಲಭ್ಯವೂ ಸಹ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ದೊರೆಯಬೇಕು. ನಿಗದಿತ ಗುರಿ, ಸಾಧನೆ, ಕೇವಲ ಅಂಕಿ-ಅಂಶಗಳಲ್ಲಿ ಮಾತ್ರ ನಮೂದಿಸಬಾರದು. ನೈಜ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರಕುತ್ತಿಲ್ಲ ಎಂಬ ದೂರುಗಳು ನನ್ನ ಗಮನಕ್ಕೆ ಬಂದಿದ್ದು, ಯೋಜನೆ ಲಾಭ ನಿಜವಾದ ಅಲ್ಪಸಂಖ್ಯಾತ ವ್ಯಕ್ತಿ ದೊರಕಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 15ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆ ಸೌಲಭ್ಯ, ಶಾಲಾ ಶಿಕ್ಷಣದಲ್ಲಿ ಸುಧಾರಣೆ, ಉರ್ದು ಭಾಷಾ ಬೋಧನೆಯ ಸಂಪನ್ಮೂಲ ಹೆಚ್ಚಿಸುವುದು, ಮದರಸಾ ಶಿಕ್ಷಣ ಉನ್ನತೀಕರಣ, ಮೌಲಾನಾ ಆಝಾಧ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಮೂಲಭೂತ ಸೌಕರ್ಯಗಳ ಸುಧಾರಣೆ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ಮಂಜೂರು, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ದಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಸಮಪಾಲು ನೀಡುವ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಭೌತಿಕ ಹಾಗೂ ಆರ್ಥಿಕವಾಗಿ ಸಮರ್ಪಕವಾಗಿ ಜಾರಿಗೊಳಿಸಿ, ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ವಸತಿ, ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಯೋಜನೆಯಡಿ ನಿಗದಿತ ಗುರಿ ಸಾಧಿಸಿ ಅನುದಾನ ಸಮರ್ಪಕ ಬಳಕೆಯಾಗಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್ ಪಾರ್ಸಿ ಒಳಗೊಂಡಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರ ಯೋಜನೆಯ ಲಾಭ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಿಸಾರ್ಅಹ್ಮದ, 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸದಸ್ಯ ರಫೀಕ್ ಭಂಡಾರಿ, ಅಲ್ಪಸಂಖ್ಯಾತ ಕಲ್ಯಾಣ ಇಲಾSಯÉ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರ ಉಪಸ್ಥಿತರಿದ್ದರು.