ವಿಜಯಪುರ: ಶ್ರಮ ಜೀವಿಗಳಾದ ದೇವಾಂಗ ಸಮುದಾಯವು ಶೈಕ್ಷಣಿಕ, ಸಂಘಟನಾತ್ಮಕವಾಗಿ ಮತ್ತಷ್ಟು ಸದೃಢರಾಗಬೇಕಿದೆ.ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಲು ಸಮಾಜದ ಬಾಂಧವರು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
ನಗರದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ವಿಜಯಪುರ ಜಿಲ್ಲಾ ದೇವಾಂಗ ಸಮಾಜದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುಸಂಸ್ಕøತ ಸಮಾಜ, ಶ್ರಮ ಜೀವಿಗಳಾಗಿರುವ ದೇವಾಂಗ ಸಮಾಜ ನಾಡಿಗೆ ವಿಶಿಷ್ಟ ಕೊಡುಗೆ ನೀಡಿದೆ. ಸಮಾಜದಲ್ಲಿರುವ ನಾಯಕರಿಗೆ ಉನ್ನತ ರಾಜಕೀಯ ಸ್ಥಾನಮಾನಗಳು ದೊರಕಿದರೆ, ಸಮಾಜ ಇನ್ನಷ್ಟು ಸಧೃಢವಾಗಿ ಬೆಳೆಯಲಿದೆ. ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಗಾಗಿ ಪ್ರತಿಯೊಬ್ಬರು ತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೈ ಜೋಡಿಸಿ ದುಡಿಯಬೇಕಿದೆ ಎಂದು ಹೇಳಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ರಾಜೇಶ ಮಾತನಾಡಿ,ದೇವಾಂಗ ಸಮಾಜದವರಿಗೆ ರಾಜಕೀಯವಾಗಿ ಸ್ಥಾನಮಾನ ನೀಡಬೇಕಾಗಿದೆ.ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ ಪ್ರಜಾಪ್ರಭುತ್ವ ತತ್ವವನ್ನು ಎತ್ತಿಹಿಡಿಯಬೇಕಾಗಿದೆ.ಸಮಾಜದ ಬಾಂಧವರು,ಯುವಕರು ವಿವಿಧ ಹಂತದ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಂಡು ಸ್ಪರ್ಧೆ ಮಾಡುವ ಮೂಲಕ ಅಸ್ತಿತ್ವ ತೋರಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷರಾದ ಶಂಕ್ರಣ್ಣ ಮುರುಡಿ ಸಮಾಜದ ಬೆಳವಣಿಗೆಯ ಮಹತ್ವ ಕುರಿತು ಮಾತನಾಡಿದರು.
ವಿಜಯಪುರ ಜಿಲ್ಲಾ ದೇವಾಂಗ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಚಿತ್ತರಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷಕುಮಾರ ಎಸ್ ಬಂಡೆ, ಉಪಾಧ್ಯಕ್ಷರಾಗಿ ದ್ರುವಕುಮಾರ ತೆಳಗಡೆ,ರೇವಣಸಿದ್ದ ಪ್ಯಾಟಿಗೌಡರ,ಸಹ ಕಾರ್ಯದರ್ಶಿಯಾಗಿ ಸಂಗಪ್ಪ ಹುಬ್ಬಳ್ಳಿ, ಖಜಾಂಚಿಯಾಗಿ ಈಶ್ವರ ದಿನ್ನಿಮನಿ,ಸಂಘಟನಾ ಕಾರ್ಯದರ್ಶಿಗಳಾಗಿ ವಿಶ್ವನಾಥ ಮರೇಗುದ್ದಿ,ಶಂಕರ ಹೆಬ್ಬಾಳ, ಗಣೇಶ ಕೂಚಬಾಳ,ಡಾ.ಸಂತೋಷ ಬಸರಕೋಡ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಸಂಘದ ಉಪಾಧ್ಯಕ್ಷ ವಿರುಪಾಕ್ಷಪ್ಪ ಗೂಳಿ,ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಗುಳೇದಗುಡ್ಡ, ರಾಜ್ಯ ಸಂಘದ ಸದಸ್ಯ ಗೋಪಾಲ ಒಣಕಿ,ನಗರ ಘಟಕದ ಅಧ್ಯಕ್ಷ ಸಿದ್ಧಾರೂಢ ಕಿರಣಿ,ಶಿವಶಂಕರ ಗೋಧಿ,ಸುರೇಶ ಕಾಬನೂರ,ನಾರಾಯಣ ತಳಗಡೆ, ಪ್ರವೀಣ ಬಸರಕೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದೇವಲ ಮಹರ್ಷಿ ಮತ್ತು ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಗುಳೇದಗುಡ್ಡ ಅವರು ನೂತನ ಅಧ್ಯಕ್ಷ ಬಸವರಾಜ ಚಿತ್ತರಗಿ, ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಅವರಿಗೆ ಸಂಘದ ಧ್ವಜವನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.