ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ನಲ್ಲಿ 40 ಸಾವಿರ ಕೋಟಿ ಹಣ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ. ಅದಕ್ಕಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ ಆಗ್ರಹಿಸಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕಿ-ಸಂಖ್ಯೆಗಳನ್ನು ಆಧಾರವಾಗಿರಿಸಿಕೊಂಡು ಹೇಳಿರುವ ಯತ್ನಾಳ ಅವರನ್ನು ತನಿಖೆ ನಡೆಸಿದರೆ ಇನ್ನಷ್ಟೂ ಸತ್ಯಾಂಶ ಹೊರಬೀಳಲಿದೆ. ಈ ಹಿಂದೆ ಯತ್ನಾಳರು ಬಿಜೆಪಿ ಸರ್ಕಾರದ ಭಾಗವಾಗಿದ್ದರು. ಆಗ ಈ ಅವ್ಯವಹಾರದ ಬಗ್ಗೆ ಧ್ವನಿ ಏಕೆ ಎತ್ತಲಿಲ್ಲ? ನಿಮ್ಮ ಪಾಲು ಅದರಲ್ಲಿತ್ತೋ? ಅಥವಾ ಪಾಲು ಹಣ ಹಂಚಿಕೆಯಲ್ಲಿ ಧಕ್ಕೆಯಾಗಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದಿರೋ ಎಂದು ಯತ್ನಾಳರಿಗೆ ಸವಾಲು ಹಾಕಿದರು. ಯತ್ನಾಳರ ಬಗ್ಗೆ ಜನರಿಗೆ ಗೌರವವಿದೆ, ಅವರ ಈ ಗೌರವ ಇನ್ನೂ ಹೆಚ್ಚಾಗಬೇಕು. ಹೀಗಾಗಿ ಮೊದಲು ಚುನಾವಣೆಗೆ ಸ್ಪರ್ಧಿಸಿದಾಗ ಎಷ್ಟು ಪ್ರಮಾಣದ ಆಸ್ತಿ ಇತ್ತು, ಈಗ ಎಷ್ಟು ಪ್ರಮಾಣದ ಆಸ್ತಿ ಇದೆ, ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ೨ ಸಾವಿರ ಕೋಟಿ ರೂ. ಎಲ್ಲಿಂದ ಬಂತು? ಎಲ್ಲವನ್ನೂ ಬಹಿರಂಗಪಡಿಸಿ ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕು ಎಂದರು. ತಮ್ಮ ಪಕ್ಷದ ಶಾಸಕರೇ ತಮ್ಮ ಪಕ್ಷದ ಅಧಿಕಾರ ಅವಧಿಯ ಭ್ರಷ್ಟಾಚಾರ ತೆರೆದಿಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮೌನವೇ ಸಮ್ಮತಿ ಲಕ್ಷಣವೆಂಬಂತೆ ಬಿಜೆಪಿ ನಾಯಕರು ಮೌನಕ್ಕೆ ಜಾರಿದಂತಿದೆ ಎಂದರು. ಗಂಭೀರವಾಗಿ ಆರೋಪ ಮಾಡಿರುವ ಯತ್ನಾಳರು ಈ ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರದ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದರು. ಕಾಂಗ್ರೆಸ್ ಯುವ ಮುಖಂಡರಾದ ಫಯಾಜ್ ಕಲಾದಗಿ, ನಾಗರಾಜ ಲಂಬು ಮೊದಲಾದವರು ಉಪಸ್ಥಿತರಿದ್ದರು.