ವಿಜಯಪುರ: ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮ ಎಂಪಿ ಸ್ಟುಡಿಯೋದಲ್ಲಿ ಸಂಭ್ರಮದಿAದ ನಡೆಯಿತು.
ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
![](https://karnataka1news.com/rugleeps/2022/09/IMG-20220918-WA0012.jpg)
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1997ರ ಸೆಪ್ಟೆಂಬರ್ 18 ರಂದು ವಿಜಯಪುರ ಆಕಾಶವಾಣಿಯು ಜನ್ಮ ತಳೆಯಿತು. ಆ ದಿನ ವಿಜಯಪುರದ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಬಹುವರ್ಷಗಳ ನಿರೀಕ್ಷೆ, ಹಂಬಲ, ಹೋರಾಟ, ಕನಸುಗಳು ಆ ವೇಳೆಯಲ್ಲಿ ಸಾಕಾರಗೊಂಡಿತು ಎಂದು ತಿಳಿಸಿದರು.
ವಿಜಯಪುರ ಆಕಾಶವಾಣಿಯು 1997ರಿಂದಲೂ ತನ್ನ ಮೂಲ ಧೇಯೋದ್ದೇಶಗಳಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸಿ, ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ, ಇತಿಹಾಸಗಳ ಎಲ್ಲಾ ಬೇರುಗಳು ಆಕಾಶವಾಣಿಯ ಧ್ವನಿ ಮುದ್ರಿಕೆಗಳಲ್ಲಿ ಭದ್ರವಾಗಿವೆ. ಇದೆ ಆಕಾಶವಾಣಿಯ ವಿಶೇಷತೆಯಾಗಿದೆ. ಈ ನೆಲದ ಜನಪದ ಸಿರಿಯದ ಗೀಗಿ, ಲಾವಣಿ, ಗೋಂಧಳಿ, ಲಂಬಾಣಿ, ಚೌಡಕಿ, ಪಾರಿಜಾತ, ಭಜನೆ, ಹಂತಿ ಪದಗಳು ಈಗಲೂ ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತವಾಗಿರುವುದು ಆಕಾಶವಾಣಿ ಕೇಂದ್ರದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.
ಈಗ ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಪ್ರಸಾರ ಸೇವೆ ಒದಗಿಸುತ್ತ ಕೇಂದ್ರವು ನಾಡಿನ ಸೇವೆಯಲ್ಲಿ ತೊಡಗಿದೆ ಎಂಬುದು ಜಿಲ್ಲೆಯ ಜನತೆಗೆ ಅಭಿಮಾನದ ಸಂಗತಿಯಾಗಿದೆ. ಕಳೆದ 25 ವರ್ಷಗಳಿಂದಲೂ ಕೇಂದ್ರದಿಂದ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮಗಳು ಸುಗಮವಾಗಿ ನಡೆದಿರುವುದರ ಹಿಂದೆ ಈ ಕೇಂದ್ರದ ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದ ಶ್ರಮವಿದೆ. ಕೇಂದ್ರದಲ್ಲಿರುವ ಎಲ್ಲರೂ ಆಕಾಶವಾಣಿಯನ್ನು ಜನಸ್ನೇಹಿ ಹಾಗೂ ಜನಪರವಾಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಅವರ ಪ್ರಯತ್ನದಿಂದ ಅನೇಕ ಗೌರವ ಸನ್ಮಾನಗಳು ಕೇಂದ್ರಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ಈ ನಾಡಿನ ಜನಸೇವೆಯಲ್ಲಿ ತೊಡಗಿಕೊಂಡು ಸಕಾರಾತ್ಮಕ ಬದಲಾವಣೆಯ ಕಾರಣ ಕರ್ತನಾಗಿ ಹೊರಹೊಮ್ಮುವ ವಿಶ್ವಾಸವನ್ನು ವಿಜಯಪುರ ಆಕಾಶವಾಣಿ ಕೇಂದ್ರವು ಹೊಂದಿದೆ. ಕೇಳುಗ ಪ್ರಭುಗಳಾದ ನಾವುಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತ ಸಂಪೂರ್ಣ ಸಹಕಾರ, ಬೆಂಬಲ ನೀಡೋಣ ಎಂದು ತಿಳಿಸಿದರು.