ವಿಜಯಪುರ: ಭೀಮಾತೀರದಲ್ಲಿ ರಕ್ತ ಚರಿತ್ರೆಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ್ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿಯನ್ನು ಆದಷ್ಟು ಬೇಗನೆ ಬಂಧನ ಮಾಡಲಾಗುವುದು ಎಂದರು.
ಅಲ್ಲದೇ, ಇಂಡಿ, ಚಡಚಣ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕೈಗೊಳ್ಳಲಾಗುವುದು. ಅದಕ್ಕಾಗಿ ಜನತೆ ಪೊಲೀಸರಿಗೆ ಸಾತ್ ನೀಡಬೇಕು ಎಂದರು.
ತದನಂತರ ನಗರದ ಚಿಂತನ ಹಾಲ್ ಆವರಣದಲ್ಲಿ ಎಡಿಜಿಪಿ ಅಲೋಕಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ಹಾಗೂ ಅಹವಾಲ್ ಸ್ವೀಕಾರ ಸಭೆ ನಡೆಯಿತು. ಅಲ್ಲದೇ, ನಗರಾದ್ಯಂತ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ಎಡಿಜಿಪಿ ಅಲೋಕಕುಮಾರ್ ಸ್ಥಳೀಯರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಮಹಾ ಸಂಘ ಹೆಸ್ರು ಹೇಳಿಕೊಂಡು ಬಂದವನಿಗೆ ಎಡಿಜಿಪಿ ಅಲೋಕಕುಮಾರ್ ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಅಹವಾಲು ಸ್ವೀಕಾರ ಸಮಯದಲ್ಲಿ ಪೊಲೀಸ್ ಅಲ್ಲದ ವ್ಯಕ್ತಿ ಪೊಲೀಸ್ ಮಹಾಸಂಘದ ಸದಸ್ಯ ಎಂದು ಮನವಿ ನೀಡಲು ಬಂದ ಶ್ರೀಕಾಂತಗೆ ಎಡಿಜಿಪಿ ಕ್ಲಾಸ್ ತೆಗೆದುಕೊಂಡರು. ನೀನು ಪೊಲೀಸ್ಸಾ??? ಪೊಲೀಸ್ ಹೆಸ್ರು ಯಾಕೆ ಬಳಸ್ತಿದ್ದೀಯಾ? ಪಾಲ್ತುಗಿರಿ ಬೇಡ… ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಾರ್ನಿಂಗ್ ನೀಡಿದರು. ಪೊಲೀಸ್ ಹೆಸ್ರು ಬಳಸಿದ್ರೆ ಹುಷಾರ್. ಇವನ ಪೋಟೋ ಹೊಡೆದುಕೊಂಡು ಕೇಸ್ ರಜಿಸ್ಟರ್ ಮಾಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದರು. ಈ ವೇಳೆಯಲ್ಲಿ ಉತ್ತರ ವಲಯ ಐಜಿಪಿ ಸತೀಶ್ಕುಮಾರ, ಎಸ್ಪಿ ಆನಂದಕುಮಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.