ವಿಜಯಪುರ: ಭಾರಿ ಮಳೆಯಿಂದಾಗಿ ಬೆಳೆಗಳು ಜಲಾವೃತಗೊಂಡಿವೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಗೆ ವಿಜಯಪುರ ತಾಲೂಕು, ಬಬಲೇಶ್ವರ, ತಿಕೋಟಾ ವ್ಯಾಪ್ತಿಯಲ್ಲಿ 1,520.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಜಲಾವೃತ ಆಗಿವೆ. ಅದಕ್ಕಾಗಿ ಪ್ರವಾಹ ಇಳಿಕೆಯಾದ ಕೂಡಲೇ ಜಂಟಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಭಾರಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾದ್ಯಂತ 140 ಮನೆಗಳು ಹಾನಿಯಾಗಿದ್ದು, ಸಿಂದಗಿ 1, ತಾಳಿಕೋಟೆ 2, ದೇವರಹಿಪ್ಪರಗಿ 6, ಬಬಲೇಶ್ವರ 13, ಇಂಡಿ 2, ಮುದ್ದೇಬಿಹಾಳ 30, ವಿಜಯಪುರ 86 ಕಚ್ಚಾ ಮನೆಗಳು ಹಾನಿಯಾಗಿದೆ. ಅಲ್ಲದೇ, ಸಿಂದಗಿಯ ಕೊಕಟನೂರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದ ಮೇಕೆ ಅಸುನೀಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸಿಂದಗಿ ತಾಲ್ಲೂಕಿನ ಬಮ್ಮನಜೋಗಿ ಕೆರೆಯ ಕೋಡಿಯಿಂದ ಬೂದಿಹಾಳ ಪಿ.ಎಚ್. ಗ್ರಾಮದ ಹಳ್ಳದ ನೀರಿನಲ್ಲಿ ಸಿಲುಕಿರುವ 6 ಜನರನ್ನು ರಕ್ಷಣೆ ಮಾಡಲಾಗಿದೆ.