ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ-ಮಗು ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣದ ತನಿಖೆ ಆರಂಭವಾಗಿದೆ. ಪ್ರಕರಣದ ತನಿಖೆಗೆ ಎಸಿ ನೇತೃತ್ವದ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ವಿಜಯಪುರ ಎಸಿ ಬಲರಾಮ ಲಮಾಣಿ ನೇತೃತ್ವದ ತನಿಖಾ ತಂಡದಲ್ಲಿ ಡಿಹೆಚ್ಓ, ಸಂತಾನೋತ್ಪತ್ತಿ ನಿಯಂತ್ರಣಾಧಿಕಾರಿ ಒಳಗೊಂಡ ತಂಡದಿಂದ ತನಿಖೆ ನಡೆಸಿದರು. ಈ ವೇಳೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಲಕ್ಕನ್ನವರ್ರಿಂದ ಮಾಹಿತಿ ಪಡೆದರು.
ಇದೇ ವೇಳೆಯಲ್ಲಿ ತನಿಖಾ ತಂಡದ ಅಧಿಕಾರಿ ಹಾಗೂ ಎಸಿ ಬಲರಾಮ ಲಮಾಣಿ ಮಾತನಾಡಿ, ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರತಿ ವೈದ್ಯರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದರು. ಪ್ರತಿಯೊಬ್ಬ ವೈದ್ಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಿದ್ದೇವೆ. ಈಗಾಗಲೇ ಡಿಸಿ ದಾನಮ್ಮನವರ ಹೇಳಿದಂತೆ 48 ಗಂಟೆಯಲ್ಲಿ ಬಾಣಂತಿಯರ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ ಎಂದರು.
ಅಲ್ಲದೇ, ಈ ಘಟನೆಗೆ ಏನೇನು ಸಮಸ್ಯೆ ಆಗಿದೆ ಎನ್ನುವುದನ್ನು ಕಾರಣ ಪಡೆದುಕೊಳ್ಳಲಾಗುತ್ತಿದೆ. ತದನಂತರ ಡಿಸಿಯವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.