ವಿಜಯಪುರ
*ಸುಕ್ಷೇತ್ರ ಶಾಂತಿಕುಟೀರ,ಕನ್ನೂರಿನಲ್ಲಿ ಭಕ್ತಿಪೂರ್ಣ ದತ್ತ ಜಯಂತಿ ಆಚರಣೆ*
ಡಿಸೆಂಬರ್-೨ ರಿಂದ ೪ರ ವರೆಗೆ ಸುಕ್ಷೇತ್ರ ಶಾಂತಿಕುಟೀರದಲ್ಲಿ ವಿಜೃಂಭಣೆಯಿಂದ ಜ್ಞಾನಯಜ್ಞ ರೂಪದಲ್ಲಿ ದತ್ತಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಗ್ರಾಮ ಸಂಕೀರ್ತನೆ, ದಾಸಬೋಧ; ಸುಲಭ ಆತ್ಮಜ್ಞಾನ ಗ್ರಂಥ ವಾಚನ, ಭಜನೆ, ಭಾರೂಡ, ಪದ ಪದ್ಯಗಾಯನ ಹಾಗೂ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಪ್ರವಚನಗಳ ಗ್ರಂಥದ ಮರಾಠಿ ಅವತರಣಿಕೆ “ಪರಮಾಮೃತ ಬೋಧ” ಪುಸ್ತಕದ ಲೋಕಾರ್ಪಣೆ, ನೂತನ ವರ್ಷದ ಶಾಂತಿಕುಟೀರ ಸಂಪ್ರದಾಯದ (ಆಧ್ಯಾತ್ಮ ಭಾಂಡಾರ) ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ, ಪುಷ್ಪವೃಷ್ಟಿ ತೊಟ್ಟಿಲೊತ್ಸವ, ಪ್ರವಚನ ಹೀಗೆ ಕಾರ್ಯಕ್ರಮದ ಸ್ವರೂಪ ಇತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಭಕ್ತಾಧಿಗಳಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಶಾಂತಿಕುಟೀರ ಟ್ರಸ್ಟ್ನವರು ಏರ್ಪಾಟು ಮಾಡಿದ್ದರು.
ಸಾಧಕನ ಲಕ್ಷಣ, ಆತ್ಮಜ್ಞಾನದ ಸುಲಭ ವಿವೇಚನೆ, ವಿಮಲ ಬ್ರಹ್ಮ ನಿರೂಪಣೆ ಮುಂತಾದ ವಿಷಯಗಳ ಮೇಲೆ ಶ್ರೀ ಎ.ಕೆ. ಕುಲಕರ್ಣಿ, ಶ್ರೀ ಗಣೇಶ ನಾಯಿಕ, ಶ್ರೀ ಶ್ರೀಕೃಷ್ಣ ಸಂಪಗಾಂವಕರ ಇವರೆಲ್ಲರಿಂದ ಜ್ಞಾನಪೂರ್ಣ ಉಪನ್ಯಾಸಗಳಾದವು. ಸದ್ಗುರುಗಳ ವಿಡಿಯೋ ದೃಶ್ಯಾವಳಿಯನ್ನು ಪ್ರದರ್ಶಿಸಲಾಯಿತು.

ಕೊನೆಯ ದಿನ ಪ್ರವಚನಾದಿಗಳ ನಂತರ ದತ್ತ ಜನ್ಮದ ಸಂಕೇತವಾಗಿ ತೊಟ್ಟಿಲೋತ್ಸವ, ಜೋಗುಳ, ಪುಷ್ಪವೃಷ್ಟಿ ಹಾಗೂ ಮಹಾಪ್ರಸಾದ ವಿತರಣೆ ಆಯಿತು. ಮುಂಬಯಿ, ಪುಣೆ, ಸಾಂಗಲಿ, ಸೋಲಾಪುರ, ಸಾವಂತವಾಡಿ, ಗೋವಾ, ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಕಲಬುರ್ಗಿ, ವಿಜಯಪುರ, ಸುತ್ತ-ಮುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ಸಪ್ತಾಹದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ಶಾಂತಿಕುಟೀರವು ಭಕ್ತಿಮಯ ವಾತಾವರಣದಲ್ಲಿ ಮಿಂದೆದ್ದಿತ್ತು ಎಂದರೆ ಅತಿಶಯೋಕ್ತಿಯಿಲ್ಲ !ಸಪ್ತಾಹ ಪೂರ್ವದಲ್ಲಿ ೧ ವಾರ ಪೂರ್ತಿ ಆಧ್ಯಾತ್ಮಿಕ ಶಿಬಿರದ (ಸಾಧನ ಶಿಬಿರ) ಏರ್ಪಾಟು ಮಾಡಲಾಗಿತ್ತು.

ಅದರಲ್ಲಿ ಸಾಂಪ್ರದಾಯಿಕ ಭಜನೆಯ ಅರ್ಥ ವಿವರಿಸಿ ಚರ್ಚಿಸಲಾಯಿತು. ಸದ್ಗುರುಗಳ ನಿವಾಸ ಸ್ಥಾನದಲ್ಲಿ ಧ್ಯಾನ, ಅವರ ಪ್ರವಚನಗಳ ಧ್ವನಿ ಸುರಳಿ ಕೇಳಿ ಚರ್ಚಿಸಲಾಯಿತು. ಸಾಧಕರಿಗೆ ಅದೊಂದು ಸಾಧನಕ್ಕಾಗಿ ಸುವರ್ಣಾವಕಾಶವೇ ಸೈ ಎನ್ನಬಹುದು.
ಸಮಾಪ್ತಿಯ ದಿನ ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಗೋವಿಂದ ಬಾಹೇತಿ, ಉಪಾಧ್ಯಕ್ಷರಾದ ಶ್ರೀ ರವಿ ದಾನಿ, ಟ್ರಸ್ಟ್ ಕಮಿಟಿ ಸದಸ್ಯರು, ಗುರು ಘರಾಣೆಯ ಕನ್ನೂರ ಮನೆತನದವರು ಹಾಗೂ ಬಹುಸಂಖ್ಯೆಯಲ್ಲಿ ಭಕ್ತಸಮೂಹ ಸೇರಿ ಕಾರ್ಯಕ್ರಮದ ಲಾಭ ಪಡೆದರು.




